ADVERTISEMENT

ವಾಚಕರ ವಾಣಿ | ಶಿಕ್ಷಣಕ್ಕೆ ಮೀಸಲಾಗಲಿ ಹೆಚ್ಚು ಹಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 19:45 IST
Last Updated 15 ಆಗಸ್ಟ್ 2021, 19:45 IST

‘...ಶಿಕ್ಷಣ ಕ್ರಾಂತಿಗಾಗಿ ಬಜೆಟ್‌ನಲ್ಲಿ ಶೇ 25ರಷ್ಟು ಹಣವನ್ನು ಮೀಸಲಿಟ್ಟು, ಸಮರ್ಪಕವಾಗಿ ಬಳಕೆ ಮಾಡಲಾಯಿತು’ ಎಂಬ ದೆಹಲಿಯ ಎಎಪಿ ಶಾಸಕಿ ಹೇಳಿಕೆ (ಪ್ರ.ವಾ., ಆ. 14) ಕರ್ನಾಟಕದ ಇಂದಿನ ಪರಿಸ್ಥಿತಿಯಲ್ಲಿ ತುಂಬ ಗಮನಾರ್ಹವಾದುದಾಗಿದೆ. ಚಂದನ ವಾಹಿನಿಯ ಮೂಲಕ ನಮ್ಮ ಪ್ರೌಢಶಾಲಾ ಮಕ್ಕಳಿಗೆ ಈಗ ನೀಡುತ್ತಿರುವ ಆನ್‌ಲೈನ್ ತರಗತಿಗಳನ್ನು ಗಮನಿಸಿ: ಎರಡು ಅವಧಿಗಳಲ್ಲಿ ಬೋಧಿಸಬಹುದಾದ ವಿಷಯವನ್ನು ಒಂದೇ ಅವಧಿಯಲ್ಲಿ ವೇಗವಾಗಿ ಹಾಗೂ ಸಂಕ್ಷಿಪ್ತವಾಗಿ ನಿರೂಪಿಸಲಾಗುತ್ತಿದೆ.

ಕೈ ಬೆರಳು ಅಥವಾ ಕೋಲಿನಿಂದ ನಿರ್ದಿಷ್ಟವಾಗಿ ಸೂಚಿಸದೆ ಇರುವುದರಿಂದ ಕಪ್ಪು ಹಲಗೆಯ ಬಳಕೆ ಸಮರ್ಪಕವಾಗಿದ್ದರೂ ಮಕ್ಕಳಿಗೆ ಅದು ಸಂವಹನವಾಗುತ್ತಿಲ್ಲ. ಇವೆಲ್ಲ ಒಂದು ರೀತಿಯಲ್ಲಿ ಪುನರಾವರ್ತನೆಯ ತರಗತಿಗಳ ಹಾಗೆ ಪರಿಣಮಿಸಿವೆ. ಮೊದಲ ಕೇಳುಗರಾದ ಬಹುಮಕ್ಕಳ ಗ್ರಹಿಕೆಗೆ ತ್ರಾಸದಾಯಕವಾಗಿವೆ.

ಇಂತಹ ಸಮಸ್ಯೆಗಳನ್ನು ಶಿಕ್ಷಕರು ಶಿಕ್ಷಣ ಅಧಿಕಾರಿಗಳೊಂದಿಗೆ ನಿವೇದಿಸಿಕೊಂಡರೂ ಅವರು ಆರ್ಥಿಕ ಕೊರತೆಯ ಕಾರಣ ಮತ್ತು ಹೆಚ್ಚಿನ ಹಣ ಮಂಜೂರಾತಿಗಾಗಿನ ಬೇಡಿಕೆಯು ತಾಂತ್ರಿಕವಾಗಿ ದುಸ್ಸಾಧ್ಯವೆಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಬಜೆಟ್ಟಿನಲ್ಲಿ ಈಗ ಶಿಕ್ಷಣಕ್ಕಾಗಿ ಮೀಸಲಿರಿಸಿರುವ ಮೊತ್ತವನ್ನು ಕನಿಷ್ಠ ದುಪ್ಪಟ್ಟುಗೊಳಿಸಬೇಕು. ನಾಡಿನ ಭವಿಷ್ಯದ ದೃಷ್ಟಿಯಿಂದ ಶಿಕ್ಷಣದ ಮಹತ್ವವನ್ನು ಅರಿತು ಈ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು.

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.