ಒಂದಾನೊಂದು ಕಾಲದಲ್ಲಿ ಪೂರ್ಣ ಉಚ್ಚರಿಸಲು ಸಹ ಸಂಕೋಚಪಡುತ್ತಿದ್ದ ಪದಗಳನ್ನು ‘ಭಾಷಾ ಮರ್ಯಾದೆ’ ಬಿಟ್ಟು ಇಂದು ಪುಂಖಾನುಪುಂಖವಾಗಿ ರಾಜಕಾರಣಿಗಳು ಬಳಸುತ್ತಾರೆ. ಒಬ್ಬ ರಾಜಕೀಯ ಮುಖಂಡ ‘ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿ ನೌಕರಿ ಪಡೆಯಬೇಕಾದರೆ ಯುವಕರು ಲಂಚ ಕೊಡಬೇಕು’ ಎಂದು ಹೇಳಿರುವುದು ಮಾತ್ರವಲ್ಲ, ‘ಯುವತಿಯರು ಮಂಚ ಏರಬೇಕು’ ಎಂದು ಸಹ ಹೇಳಿಬಿಟ್ಟಿದ್ದಾರೆ.
ಬಿಜೆಪಿ ಆಡಳಿತದಲ್ಲಿ ನೌಕರಿ ಪಡೆದ ಯುವಕರೆಲ್ಲ ಲಂಚ ಕೊಟ್ಟವರು ಮತ್ತು ಯುವತಿಯರೆಲ್ಲ ಮಂಚ ಏರಿದವರು ಎನ್ನುವ ಅತ್ಯಂತ ಅಸಭ್ಯ ಅರ್ಥವನ್ನು ಇದು ಕೊಡುತ್ತದೆ. ಲಂಚ ಕೊಡುವುದು, ಅಧಿಕಾರ ಸಿಕ್ಕಾಗ ಅದನ್ನು ಪಡೆಯುವುದು ಈಗ ನೌಕರಶಾಹಿಯಲ್ಲಿ ಸಾಮಾನ್ಯ. ಆದರೆ ಮಂಚ ಏರಿದವರು ಎಂದರೆ? ನೌಕರಿ ಪಡೆದ ಮಹಿಳಾ ಸಮುದಾಯವನ್ನೇ ಇಂಥವರು ಎಂದು ಬೊಟ್ಟು ಮಾಡಿ ತೋರಿಸಿದಂತಲ್ಲವೇ?
ಬಳಿಕವೂ ಮುಖಂಡರು ತಾವು ಹೀಗೆ ಹೇಳಿದ್ದು ಅವೇಶದ ಭರದಲ್ಲಿ ಎನ್ನದೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿ ಮಣ್ಣಿನ ಹೆಂಟೆ ಕಲ್ಲಿಗೆ ಬಡಿಯಲಿ, ಕಲ್ಲೇ ಮಣ್ಣಿನ ಹೆಂಟೆಗೆ ಬಡಿಯಲಿ ಪುಡಿಯಾಗುವುದು ಮಣ್ಣಿನ ಹೆಂಟೆ ಎನ್ನುವುದನ್ನು ಮುಖಂಡರು ಮರೆತಿರುವುದು ವಿಷಾದಕರ.
–ಸತ್ಯಬೋಧ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.