ಒಂದು ದಿನದ ಕಲಾಪಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ ಎಂಬುದು ನನ್ನಂಥ ಸಾಮಾನ್ಯರಿಗೆ ಇತ್ತೀಚೆಗಷ್ಟೇ ಮಾಧ್ಯಮಗಳ ಮುಖಾಂತರ ತಿಳಿದಾಗ, ನಮ್ಮ ತೆರಿಗೆ ಹಣವನ್ನು ಸರ್ಕಾರ ಎಷ್ಟು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ಶುರುವಾಗಿದೆ. ವಿಧಾನ ಮಂಡಲದ ಕಲಾಪವು ಐದು ದಿನಗಳಿಂದ ಸುಸೂತ್ರವಾಗಿ ನಡೆಯದೇ ಇದ್ದುದರಿಂದ ನಮ್ಮ ತೆರಿಗೆ ಹಣ ಉಳಿತಾಯ ಆಗಿದೆಯೋ ಅಥವಾ ನಷ್ಟವಾಗಿದೆಯೋ ಎಂದು ಜನಸಾಮಾನ್ಯರಿಗೆ ತಿಳಿಸುವ ಜವಾಬ್ದಾರಿ ಯಾರದು?
ಸಾಮಾನ್ಯವಾಗಿ ಮತದಾರನ ಆಶಯಗಳಿಗೆ ಅನುಗುಣವಾಗಿ ಸದನದ ಕಲಾಪ ನಡೆದರೆ ಅದು ಲಾಭ, ಉಳಿದಂತೆ ಸುಸೂತ್ರವಾಗಿ ನಡೆಯದ ಕಲಾಪವು ಕೋಟಿಗಟ್ಟಲೆ ತೆರಿಗೆ ಹಣದ ನಷ್ಟಕ್ಕೆ ಕಾರಣವಾಗುವುದಲ್ಲದೆ ಮತದಾರನ ಆಶಯಗಳಿಗೆ ವಿರುದ್ಧವಾದ ನಡೆಯಾಗುತ್ತದೆ. ಆದ್ದರಿಂದ ಮತದಾರನ ಪರವಾಗಿ ಸದನದಲ್ಲಿರುವ ಜನಪ್ರತಿನಿಧಿಗಳು ಸುಸೂತ್ರವಾಗಿ ನಡೆಯದ ಕಲಾಪಗಳಿಗೆ ಕಾರಣವಾಗುವ ಅಂಶಗಳನ್ನು ತಡೆಯುವ ಮೂಲಕ ಜನಹಿತ ಮನೋಭಾವ ತೋರುವಂತಾಗಬೇಕು. ಈ ದಿಸೆಯಲ್ಲಿ ಸರ್ವ ಪಕ್ಷಗಳೂ ಚಿಂತನೆ ನಡೆಸಲಿ.
-ಡಾ.ಜಿ.ಬೈರೇಗೌಡ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.