ADVERTISEMENT

ರಾಜಕೀಯ ವಲಸೆಗೆ ಬೇಕು ಕಠಿಣ ನಿರ್ಬಂಧ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಜನವರಿ 2022, 19:30 IST
Last Updated 26 ಜನವರಿ 2022, 19:30 IST

ವಲಸೆ ಎನ್ನುವುದು ಈಗ ರಾಜಕೀಯ ಕ್ಷೇತ್ರದಲ್ಲಿ ಸಾಮಾನ್ಯ ವಿದ್ಯಮಾನವಾಗಿ ಬೆಳೆಯುತ್ತಿರುವುದು ಹೇವರಿಕೆ ತರಿಸುವಂತಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಅಂಟಿದ ಅಶಿಸ್ತಿನ ನಡೆ ಮಾತ್ರವಲ್ಲ ನಾವು ಆರಿಸಿ ಕಳುಹಿಸಿದವರ ನೈತಿಕತೆಯ ಪ್ರಶ್ನೆಯೂ ಹೌದು. ಪಕ್ಷ ಯಾವುದೇ ಇರಲಿ ಅದರ ಸಿದ್ಧಾಂತಗಳು, ಪ್ರಣಾಳಿಕೆಗಳು ರಾಜ್ಯ, ದೇಶದ ಸುರಕ್ಷೆ ಮತ್ತು ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರಶ್ನಾತೀತವಾಗಿ ಇರಬೇಕಾದದ್ದು ನ್ಯಾಯ. ಅಂತಹ ಮೌಲ್ಯಗಳನ್ನು ಒಮ್ಮೆ ಒಪ್ಪಿ ಅಪ್ಪಿಕೊಂಡು ಬಂದ ರಾಜಕೀಯ ನಾಯಕರು ಆ ಪಕ್ಷಗಳಿಂದ ಗೆಲುವನ್ನು ಸಾಧಿಸಿ ಉನ್ನತ ಸ್ಥಾನಗಳಲ್ಲಿದ್ದರೂ ಮುಂದೆ ತಮ್ಮ ಸ್ವಾರ್ಥ ಸಾಧನೆಗಾಗಿ, ಕೈಹಿಡಿದ ಪಕ್ಷ ಮತ್ತು ಮತದಾರರನ್ನು ಕಡೆಗಣಿಸುವುದು ಯಾರು ಕೂಡಾ ಸಂಭ್ರಮಿಸುವ ಸಂಗತಿಯಲ್ಲ. ಇವರನ್ನು ಬೆಂಬಿಡದೆ ಹಿಂಬಾಲಿಸುವ ಗುಂಪು ಈ ವಿಚಾರದತ್ತ ಯೋಚಿಸುವುದೇ ಇಲ್ಲ. ಕಾರಣ ಅವರನ್ನು ತಮ್ಮ ಸುಪರ್ದಿಯಲ್ಲಿಡಲು ಇವರು ಏನೆಲ್ಲಾ ಬೇಕೊ ಅದೆಲ್ಲವನ್ನೂ ಮಾಡಿರುತ್ತಾರೆ. ಇಂತಹ ರಾಜಕೀಯ ವ್ಯಕ್ತಿಗಳ ನಡೆಯನ್ನು ನೇರ್ಪುಗೊಳಿಸಲು ಇರುವ ಏಕೈಕ ಅಸ್ತ್ರ ಮತವಾದರೂ ಅದನ್ನೂ ಇವರು ಖರೀದಿಸುವ ಹಂತಕ್ಕೆ ಯಾವತ್ತೋ ಬಂದಾಗಿದೆ. ಮನಸ್ಸು ಬಂದಾಗ ಪಕ್ಷದಿಂದ ಪಕ್ಷಕ್ಕೆ ನಾಚಿಕೆಯಿಲ್ಲದೆ ಜಿಗಿಯುವ ಇವರನ್ನು ನಿಯಂತ್ರಿಸಲು ಒಂದೋ ಮತದಾರ ಜಾಗೃತನಾಗಬೇಕು ಇಲ್ಲವೇ ವಲಸೆ ವಿರುದ್ಧ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು. ಇಲ್ಲದಿದ್ದರೆ ಇವರ ಅಸಹ್ಯ ತರಿಸುವ ಮರ್ಕಟ ಹಾರಾಟವನ್ನು ನಾವೆಲ್ಲ ಕಣ್ಣು, ಕಿವಿ, ನಾಲಗೆ ಇದ್ದೂ ಸಹಿಸಿಕೊಳ್ಳಬೇಕಾದೀತು!

- ಧರ್ಮಾನಂದ ಶಿರ್ವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT