ವಾಚಕರ ವಾಣಿ
ಸತ್ಯ ಆನೆಯ ಮೇಲೆ, ಸುಳ್ಳು ವಿಮಾನದಲ್ಲಿ
ದೆಹಲಿಯಲ್ಲಿ ನಡೆಯುತ್ತಿರುವ ‘ಎ.ಐ. ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಚೀನಾನಿರ್ಮಿತ ‘ರೋಬೊಶ್ವಾನ’ವನ್ನು ನಮ್ಮ ತಂತ್ರಜ್ಞಾನವೆಂದು ಹೇಳಿಕೊಳ್ಳುವ ಧೈರ್ಯ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯಕ್ಕೆ ಹೇಗೆ ಬಂತು? ಸತ್ಯ ಆನೆಯ ಮೇಲೆ ಗಂಭೀರವಾಗಿ ಸಾಗುತ್ತಿರುವ ಹೊತ್ತಿನಲ್ಲಿ ಇಂತಹ ಸುಳ್ಳುಗಳು ವಿಮಾನವೇಗದಲ್ಲಿ ಪ್ರಚಾರ ಪಡೆಯುತ್ತಿರುವುದು ತಂತ್ರಜ್ಞಾನದ ದುರುಪಯೋಗಕ್ಕೆ ಸ್ಪಷ್ಟ ಹಾಗೂ ಹೊಸ ಉದಾಹರಣೆಯಾಗಿದೆ. ಸತ್ಯಕ್ಕಾಗಿ ರಾಜ್ಯವನ್ನೇ ತ್ಯಾಗ ಮಾಡಿದ ರಾಜಾ ಹರಿಶ್ಚಂದ್ರನ ಭರತಭೂಮಿಯಲ್ಲಿ, ಅಧಿಕಾರಕ್ಕಾಗಿ ನಿತ್ಯ ಸುಳ್ಳುಗಳ ಹಬ್ಬ ಆಚರಿಸುತ್ತಿರುವ ನಮ್ಮ ರಾಜಕಾರಣದ ನಡೆಗಳು ಸುಧಾರಣೆಯಾಗಬೇಕು. ರಾಜಕಾರಣದ ನಡವಳಿಕೆಗಳು ಜನಸಾಮಾನ್ಯರಿಗೆ ಆದರ್ಶ ಆಗಿರಬೇಕೆ ಹೊರತು, ಅವರನ್ನು ದಿಕ್ಕುತಪ್ಪಿಸುವಂತೆ ಇರಬಾರದು.
-ತಾ.ಸಿ. ತಿಮ್ಮಯ್ಯ, ಬೆಂಗಳೂರು
ತುರ್ತು ಸಂಪರ್ಕ: ಬೇಜವಾಬ್ದಾರಿ ಸಲ್ಲದು
ತುರ್ತು ಪರಿಹಾರ ತಂಡದ ಎಂಜಿನಿಯರ್ ಒಬ್ಬರು ತಮ್ಮ ಮೊಬೈಲ್ ಸಂಖ್ಯೆಗೆ ‘ಸ್ವಿಚ್ಡ್ ಆಫ್’ ಕಾಲರ್ ಟ್ಯೂನ್ ಅಳವಡಿಸಿಕೊಂಡಿರುವ ಸುದ್ದಿ (ಪ್ರ.ವಾ., ಫೆ. 19) ಕಳವಳ ಹುಟ್ಟಿಸುವಂತಹದ್ದು. ಸಂಕಷ್ಟದ ಹೊತ್ತಿನಲ್ಲಿ ಜನರಿಗೆ ತಕ್ಷಣ ಸಹಾಯ ದೊರಕಬೇಕಾದರೆ ತುರ್ತು ಸಂಪರ್ಕ ವ್ಯವಸ್ಥೆ ಸದಾ ಸಜ್ಜಾಗಿರಬೇಕು. ಅಪಘಾತ, ಆರೋಗ್ಯ ತುರ್ತು ಪರಿಸ್ಥಿತಿ ಅಥವಾ ಇನ್ನಿತರೆ ಅನಿವಾರ್ಯ ಸಂದರ್ಭಗಳಲ್ಲಿ ಜನರು ಮೊದಲು ನೆನಪಿಸಿಕೊಳ್ಳುವುದು ತುರ್ತು ಸಂಖ್ಯೆಗಳನ್ನೇ. ಇಂತಹ ಅತ್ಯವಶ್ಯ ಸೇವೆಗಳನ್ನು ಒದಗಿಸಬೇಕಾದವರು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತುರ್ತು ಸಂಖ್ಯೆಗಳು ಯಾವಾಗಲೂ ಲಭ್ಯವಾಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಿಬ್ಬಂದಿಗೆ ಅವರ ಹೊಣೆಗಾರಿಕೆಯ ಅರಿವು ಮೂಡಿಸಿ, ನಿರ್ಲಕ್ಷ್ಯ ತೋರಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
-ಹನುಮಂತ ಆರ್.ಸಿ., ಹುನಗುಂದ
ಸ್ಮಾರ್ಟ್ ಕಾರ್ಡ್: ವಿವೇಚನಾರಹಿತ ನಡೆ!
‘ಶಕ್ತಿ’ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್ ಕೊಡುವ ಸರ್ಕಾರದ ನಿರ್ಧಾರದ ಸಾಧಕ ಬಾಧಕಗಳ ವಿಶ್ಲೇಷಣೆಯ ಸಂಪಾದಕೀಯ (ಫೆ. 19) ಸಮಯೋಚಿತ. ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಿದ್ದರೂ, ಇಂತಹ ಹಣ ಹೊಡೆಯುವ ಕಾರ್ಯಗಳಿಗೆ ಯಾವ ಕೊರತೆಯೂ ಇಲ್ಲ ಎನ್ನುವುದನ್ನು ಸ್ಮಾರ್ಟ್
ಕಾರ್ಡ್ನಂತಹ ಯೋಜನೆಗಳು ಸಾಬೀತು ಪಡಿಸುವಂತಿವೆ. ನಾಗರಿಕರ ತೆರಿಗೆ ಹಣವನ್ನು ಪೋಲು ಮಾಡುವ ಈ ಯೋಜನೆಯನ್ನು ಸರ್ಕಾರ ಕೈ ಬಿಡಲಿ. ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಅನಗತ್ಯ ಗೊಂದಲ ಉಂಟುಮಾಡದಿರಲಿ. ಈಗಾಗಲೇ ಹಲವು ಕಾರ್ಡ್ಗಳ ಗೊಂದಲವನ್ನು ಜನಸಾಮಾನ್ಯರು ಅನುಭವಿಸುತ್ತಿದ್ದಾರೆ. ಆ ಸಾಲಿಗೆ ಇನ್ನೊಂದು ಕಾರ್ಡ್ ಸೇರದಿರಲಿ.
⇒ಮುಳ್ಳೂರು ಪ್ರಕಾಶ್, ಮೈಸೂರು
ಕ್ರಿಕೆಟ್ಗಿದು ಆತ್ಮಾವಲೋಕನದ ಸಮಯ
ಭಾರತದ ಕ್ರಿಕೆಟ್ ತಂಡವು ಪಾಕಿಸ್ತಾನ ತಂಡದ ವಿರುದ್ಧ ಪಂದ್ಯ ಗೆದ್ದಾಗಲೆಲ್ಲ
ನಾವು, ರಣಾಂಗಣದಲ್ಲಿ ಆ ದೇಶವನ್ನೇ ಸೋಲಿಸಿ ಹಿಮ್ಮೆಟ್ಟಿಸಿ ನಿರ್ನಾಮಗೊಳಿಸಿ
ದವರಂತೆ ಸಂಭ್ರಮಿಸುತ್ತೇವೆ. ಕ್ರಿಕೆಟ್ ಆಟವನ್ನು ಅತಿಯಾಗಿ ಮೋಹಿಸುವ ಮೂಲಕ
ಇತರ ಆಟೋಟಗಳನ್ನೂ ದೇಸೀ ಕ್ರೀಡೆಗಳನ್ನೂ ಪರೋಕ್ಷವಾಗಿ ಕಡೆಗಣಿಸುತ್ತೇವೆ. ಈ ಮೋಹವನ್ನು ತಾರಕ ಮಟ್ಟಕ್ಕೆ ಕೊಂಡೊಯ್ದಿದ್ದೇವೆ. ಇತರ ಆಟಗಳನ್ನು ಕಡೆಗಣಿಸಿದ್ದೇವೆ. ಆರೋಗ್ಯಕ್ಕೆ ಹಿತಕರವಲ್ಲದ ತಿನಿಸು–ಪಾನೀಯಗಳ ಜಾಹಿರಾತು
ಗಳಿಂದಲೂ ಕೋಟ್ಯಂತರ ಜನರ ದುಡಿಮೆಯ ಹಣ ಬಾಚಿದ ಕ್ರೀಡಾಳುವಿಗೆ ದೇಶದ ಅತ್ಯುನ್ನತ ಪ್ರಶಸ್ತಿ ನೀಡುತ್ತೇವೆ. ಕ್ರಿಕೆಟ್ ವ್ಯಾಮೋಹಿಗಳು, ಅದರಲ್ಲೂ ಯುವಸಮೂಹ, ಜೊತೆಗೆ, ದೇಶವನ್ನು ಆಳುವವರು, ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.
-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಪ್ರಜಾಸತ್ತಾತ್ಮಕ ಸಂವಾದ ದಿಕ್ಕುತಪ್ಪದಿರಲಿ
‘ಮನರೇಗಾ’ ಯೋಜನೆ ಗ್ರಾಮೀಣ ಉದ್ಯೋಗ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಅದರ ಹೆಸರು, ವಿನ್ಯಾಸ ಅಥವಾ ಜಾರಿಗೆ ಸಂಬಂಧಿಸಿದ ಚರ್ಚೆಗಳು ನಡೆಯಬಹುದು; ಅವು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ಸಹಜ ಪ್ರಕ್ರಿಯೆಗಳೇ. ಆದರೆ ಆ ಚರ್ಚೆಗಳನ್ನು ವಿಚಾರಪೂರ್ಣವಾಗಿ, ದತ್ತಾಂಶಾಧಾರಿತವಾಗಿ ಮತ್ತು ಜನಹಿತದ ದೃಷ್ಟಿಯಿಂದ ನಡೆಸಬೇಕು. ಹೆಸರಿನ ಮೇಲೆ ನಡೆಯುವ ರಾಜಕೀಯಕ್ಕಿಂತ, ಯೋಜನೆಯ ಪರಿಣಾಮಕಾರಿತ್ವ, ಪಾರದರ್ಶಕತೆ ಮತ್ತು ಗ್ರಾಮೀಣ ಜೀವನಮಟ್ಟದ ಮೇಲಿನ ಪರಿಣಾಮಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ.
ಇಂದಿನ ಸಾರ್ವಜನಿಕ ಸಂವಾದದಲ್ಲಿ ನಾವು ಕಾಣುತ್ತಿರುವುದು ಭಾವನಾತ್ಮಕ ಪ್ರತಿಕ್ರಿಯೆಗಳ ಹೆಚ್ಚಳ. ಸಮಸ್ಯೆಗಳ ಪರಿಹಾರಕ್ಕೆ ಶಾಂತ ಮನಸ್ಸು, ಸ್ಪಷ್ಟ ಚಿಂತನೆ ಮತ್ತು ಪರಸ್ಪರ ಗೌರವ ಅವಶ್ಯಕ. ಗಾಂಧೀಜಿ ನಮಗೆ ಕಲಿಸಿದ್ದೂ ಇದೇ — ವಿರೋಧಿಯನ್ನೂ ಮಾನವೀಯ ದೃಷ್ಟಿಯಿಂದ ನೋಡುವುದು ಮತ್ತು ಭಿನ್ನಾಭಿಪ್ರಾಯದಲ್ಲಿಯೂ ನೈತಿಕ ಮಟ್ಟವನ್ನು ಕಾಪಾಡಿಕೊಳ್ಳುವುದು.
ರಾಜಕೀಯ ಸ್ಪರ್ಧೆ ಅನಿವಾರ್ಯ. ಆದರೆ ರಾಷ್ಟ್ರೀಯ ಸಂಕೇತಗಳ ಬಳಕೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಚರ್ಚೆಗಳಲ್ಲಿ ನಾವು ಸಮತೋಲನ, ಪ್ರೌಢತೆ ಮತ್ತು ಮೌಲ್ಯಾಧಾರಿತ ನಿಲುವು ತಾಳಬೇಕು. ಆಗ ಮಾತ್ರ ನಮ್ಮ ಪ್ರಜಾಸತ್ತಾತ್ಮಕ ಸಂವಾದ ಆರೋಗ್ಯಕರ ದಿಕ್ಕಿನಲ್ಲಿ ಸಾಗುತ್ತದೆ.
-ಎಂ. ರವೀಂದ್ರ, ಬೆಂಗಳೂರು
ದ್ವೇ(ದೋ)ಷ!
ದ್ವೇಷಭಾಷಣ ತಡೆಗೆ
ಮಸೂದೆ.
ಆದರೆ,
ದೇಶೋವಿಶಾಲವಾದ
ದೋಷ ಭಾಷಣ
ಮತ್ತು ಬರಹಕ್ಕೆ
ಅಡೆತಡೆ ಎಲ್ಲಿದೆ?
ದೋಷಕ್ಕಿರಲಿ ದ್ವೇಷ!
-ಸಿ.ಪಿ.ಕೆ., ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.