ADVERTISEMENT

ಬಿಸಿಯೂಟ ತಯಾರಿ: ಕನಿಷ್ಠ ಕೂಲಿಯಾದರೂ ಸಿಗಲಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 16:24 IST
Last Updated 20 ಜನವರಿ 2022, 16:24 IST

ನಮ್ಮ ಪರಿಚಯದವರ ಮಕ್ಕಳು ಹೋಗುತ್ತಿರುವ ಸರ್ಕಾರಿ ಶಾಲೆಯ ಅಡುಗೆ ಸಿಬ್ಬಂದಿ ಇತ್ತೀಚೆಗೆ ರಾಜೀನಾಮೆ ನೀಡಿ ಕೂಲಿ ಕೆಲಸದತ್ತ ಮುಖ ಮಾಡಿದರು. ಕೊರೊನಾ ಅವಧಿಯಲ್ಲಿ ಸುಮಾರು ಒಂದು ವರ್ಷ ಮಕ್ಕಳಿಗೆ ಬಿಸಿಯೂಟ ಇರಲಿಲ್ಲ.
ಆಗ ನಿರುದ್ಯೋಗಿಗಳಾದ ಬಿಸಿಯೂಟ ತಯಾರಕರು ನಿಚ್ಚಳವಾಗಿ ನಿರ್ಗತಿಕರಾದರು. ಇವರಿಗೆ ಕೊರೊನಾ ಪ್ಯಾಕೇಜ್‌ನಲ್ಲೂ ಏನೂ ದೊರೆಯಲಿಲ್ಲ. ಹೀಗಾಗಿ ಇವರು ರಾಜೀನಾಮೆ ನೀಡಬೇಕಾಯಿತು. ಸಮಸ್ಯೆ ಏನೆಂದರೆ, ಬಿಸಿಯೂಟ ತಯಾರಿಸಲು ಅವರ ಜಾಗಕ್ಕೆ ಎಷ್ಟೇ ಪ್ರಯತ್ನ ಮಾಡಿದರೂ ಯಾರೂ ಬರಲು ಒಪ್ಪಲಿಲ್ಲ. ತದನಂತರ ಊರ ಹಿರಿಯರ ಕೋರಿಕೆಯ ಮೇರೆಗೆ, ಮಕ್ಕಳಿಗೆ ಊಟ ತಪ್ಪಬಾರದೆಂದು ಪೋಷಕರೇ ಬಂದು ಕೆಲಸಕ್ಕೆ ಸೇರಿಕೊಂಡರು. ಕಾರಣವಿಷ್ಟೇ, ಅಲ್ಲಿ ದೊರಕುವುದು ತಿಂಗಳಿಗೆ ಕೇವಲ ಎರಡೂವರೆ ಸಾವಿರ ರೂಪಾಯಿಯ ಆಸುಪಾಸು. ಹಾಗಾಗಿ ಇವತ್ತು ಕೂಲಿಗೆ ಹೋದರೆ ಪ್ರತಿದಿನ ₹ 250-300 ಸಿಗದೇ ಇರದು. ಅಂದರೆ ತಿಂಗಳಿಗೆ ಎಂಟರಿಂದ ಒಂಬತ್ತು ಸಾವಿರ ದುಡಿದುಕೊಳ್ಳಬಹುದು.

ಬೆಲೆ ಏರಿಕೆಯ ಇಂದಿನ ಪ್ರಕೋಪದಲ್ಲಿ ತಿಂಗಳಿಗೆ ಎರಡೂವರೆ ಸಾವಿರ ರೂಪಾಯಿ ಪಡೆದು ಯಾರಾದರೂ ಕುಟುಂಬ ನಿರ್ವಹಣೆ ಮಾಡಬಲ್ಲರೇ? ದೇಶದ ನಿರ್ಮಾತೃಗಳಾಗಬಲ್ಲ ಮಕ್ಕಳಿಗೆ ಊಟ ತಯಾರಿಸುವ ತಾಯಂದಿರಿಗೇಕೆ ಈ ಪರಿ ಅನ್ಯಾಯ? ಇದು ಹರತಾಳ, ಹೋರಾಟಗಳಿಂದ ಈಡೇರಿಸಬೇಕಾದ ಬೇಡಿಕೆಯಲ್ಲ. ಕೇವಲ ಮಾತೃ ಹೃದಯದಿಂದ ಪರಿಗಣಿಸಬೇಕಾದ ಬೇಡಿಕೆ. ಅವರೇನೂ ಭಾರಿ ಮೊತ್ತ ಕೇಳುತ್ತಿಲ್ಲ. ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ಕೂಲಿಯ ಮೊತ್ತವನ್ನಾದರೂ ಕೊಡಬೇಕು.
ಸರೋಜಿನಿ ನಾಯಕ್, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT