ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ವೃದ್ಧರಿಗೂ ಬಿಸಿಯೂಟ ಕೊಡಿ’ ಎಂಬ ವಿಜಯ್ ರಾಂಪುರ ಅವರ ಬೇಡಿಕೆ (ವಾ.ವಾ., ಡಿ. 20) ಸೂಕ್ತವಾಗಿದ್ದರೂ ಆತಂಕ ಮೂಡಿಸುವಂಥದ್ದು. ಸರ್ಕಾರಿ ಶಾಲೆಗಳಲ್ಲಿಈಗಾಗಲೇ ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಅಂತೆಲ್ಲ ನೀಡುತ್ತಿರುವುದರಿಂದ ಮೇಷ್ಟ್ರುಗಳಿಗೆ ಪಾಠ ಮಾಡಲು ಪುರಸತ್ತೇ ಇಲ್ಲದಂತಾಗಿದೆ. ಇವುಗಳನ್ನು ನಿರ್ವಹಿಸುವ ಮೇಷ್ಟ್ರ ಮೇಲೆ ಜನರ ಗುಮಾನಿ, ತಿಕ್ಕಾಟ, ಕಿರಿಕಿರಿ ಇದ್ದದ್ದೇ.
ಬರಬರುತ್ತಾ ಎಲ್ಲ ಶಾಲೆಗಳೂ ಊಟದ ಮೆಸ್ಸೊ, ಧರ್ಮಛತ್ರವೊ ಆಗಿ ಪರಿವರ್ತನೆ ಆಗಿಬಿಡುತ್ತವೆಯೋಎಂಬ ಭಯ ಕಾಡುತ್ತದೆ. ಮಕ್ಕಳಿಗೆ ಕಲಿಸುವ ಶಾಲೆಯ ಮೂಲ ಉದ್ದೇಶವೇ ಗೌಣವಾಗಿ ಇತರ ಕೆಲಸಗಳೇ ರಾರಾಜಿಸುವಂತಾಗಿದೆ. ಇಂತಹ ಸ್ಥಿತಿಯಲ್ಲಿ ವೃದ್ಧರನ್ನು ಶಾಲೆಗೆ ಕರೆತಂದು ಬಿಸಿಯೂಟ ಕೊಡುವುದಕ್ಕೆ ಶುರುಮಾಡಿದರೆ, ಅಲ್ಲಿಗೆ ಸರ್ಕಾರಿ ಶಾಲೆಯ ಗತಿ ಏನಾಗಬೇಕು? ವೃದ್ಧರಿಗೆ ಊಟ ಒದಗಿಸುವುದು ತುಂಬಾ ಒಳ್ಳೆಯ ಯೋಚನೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅದಕ್ಕೆ ವ್ಯವಸ್ಥೆ ಮಾಡುವುದು ಬೇಡ ಅನಿಸುತ್ತದೆ.
ಅರವಿಂದ ಎಂ.,ಸುರಹೊನ್ನೆ, ನ್ಯಾಮತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.