ಬಾನು ಮುಷ್ತಾಕ್
ಜಾತ್ಯತೀತ ತತ್ತ್ವಕ್ಕೆ ಸಂದ ಗೆಲುವು
ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾದ ದಸರೆಯನ್ನು ಮುಸ್ಲಿಂ ಮಹಿಳೆ ಉದ್ಘಾಟಿಸಿದ್ದು, ಧರ್ಮಕ್ಕಿಂತಲೂ ಒಬ್ಬ ವ್ಯಕ್ತಿಯ ಸಾಧನೆ, ವ್ಯಕ್ತಿತ್ವ ಮತ್ತು ಸಾಮಾಜಿಕ ಕೊಡುಗೆಗೆ ಹೆಚ್ಚಿನ ಮಹತ್ವ ನೀಡಿದಂತಾಗಿದೆ. ಇದು ಧಾರ್ಮಿಕ ಸಹಿಷ್ಣುತೆ ಮತ್ತು ಸಾಮರಸ್ಯವನ್ನು ಎತ್ತಿಹಿಡಿಯುವ ಪ್ರಮುಖ ಹೆಜ್ಜೆ.
ಹೋರಾಟದ ಹಿನ್ನೆಲೆಯುಳ್ಳ ಮಹಿಳೆಗೆ ದಸರಾದಂತಹ ನಾಡಹಬ್ಬದ ಉದ್ಘಾಟನಾ ಗೌರವ ನೀಡಿರುವುದು, ಹೋರಾಟ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಂತ ಮಹಿಳೆಯರಿಗೆ ಸಂದ ಗೌರವ. ಆ ಮೂಲಕ, ರಾಜ್ಯ ಸರ್ಕಾರವು ಮಹಿಳೆಯೊಬ್ಬರ ಬೌದ್ಧಿಕ ಮತ್ತು ಕಲಾತ್ಮಕ ಸಾಧನೆಗಳಿಗೆ ಅತ್ಯುನ್ನತ ಗೌರವ ನೀಡಿದೆ. ಬಹಳಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದ್ದರೂ, ಸರ್ಕಾರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು, ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯದವರು ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನ
ಅಲಂಕರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
-ಸಂಧ್ಯಾ ಹೆಚ್.ಎಸ್., ಹಂಪಿ
****
ಹೊಸ ಕಂದಾಯ ಗ್ರಾಮ ಘೋಷಣೆ
ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳಿಗೆ ಹಕ್ಕು ದಾಖಲೆ ಕೊಡುವ ಹಿನ್ನೆಲೆಯಲ್ಲಿ ಹೊಸ ಕಂದಾಯ ಗ್ರಾಮ, ಹೊಸ ಕಂದಾಯ ಉಪ ಗ್ರಾಮಗಳನ್ನು ರಚಿಸುತ್ತಿರುವುದು ಸ್ವಾಗತಾರ್ಹ.
ಗ್ರಾಮ ಠಾಣಾಕ್ಕೆ ಹೊಂದಿಕೊಂಡೇ ಬೆಳೆದಿರುವ ದಾಖಲೆರಹಿತ ಜನವಸತಿ ಪ್ರದೇಶಗಳಿಗೆ ಉಪ ಕಂದಾಯ ಗ್ರಾಮ ರಚಿಸುವ ಮೂಲಕ, ಹಕ್ಕು ದಾಖಲೆ ನೀಡುವುದನ್ನು ಸಾರ್ವತ್ರಿಕವಾಗಿ ಯೋಚಿಸಿರುವುದನ್ನು ಪುನರ್ ಪರಿಶೀಲಿಸಬೇಕು. ಉಪ ಕಂದಾಯ
ಗ್ರಾಮ ಅಥವಾ ಗ್ರಾಮ ಠಾಣಾ ವಿಸ್ತರಣೆ ಇವೆರಡರಲ್ಲಿ ಯಾವುದು ಸುಲಭ ಹಾಗೂ ತ್ವರಿತವಾಗಿ ಮಾಡಲು ಸಾಧ್ಯವೋ ಆ ಆಯ್ಕೆ ಮಾಡಿಕೊಳ್ಳುವ ವಿವೇಚನಾಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಆಗ ಗ್ರಾಮ ಠಾಣಾಕ್ಕೆ ಹೊಂದಿಕೊಂಡಿರುವ ದಾಖಲೆರಹಿತ ಜನವಸತಿ ಪ್ರದೇಶಗಳಿಗೆ ತ್ವರಿತವಾಗಿ ಹಕ್ಕು ದಾಖಲೆ ನೀಡಲು ಸಾಧ್ಯ.
-ತೇಜಸ್ವಿ ವಿ. ಪಟೇಲ್, ಕಾರಿಗನೂರು
****
ಕೆ–ಸೆಟ್: ‘ಕೆಇಎ’ ಮಲತಾಯಿ ಧೋರಣೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ‘ಕೆ–ಸೆಟ್’ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಿದೆ. ರಾಜ್ಯದ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಈ ಪರೀಕ್ಷೆ ಅರ್ಹತಾ ಮಾನದಂಡ.
ಆದರೆ, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ತಿದ್ದುಪಡಿಗೆ ಅಥವಾ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಈ ಸಂಬಂಧ ವಿಚಾರಿಸಲು ಕೆಇಎ ನೀಡಿರುವ ಸಹಾಯವಾಣಿಗೆ ಕರೆ ಮಾಡಿದರೂ ‘ನಮ್ಮ ಕಾರ್ಯ ನಿರ್ವಾಹಕರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ’ ಎಂಬ ಪ್ರತಿಕ್ರಿಯೆ ಬಿಟ್ಟರೆ ಬೇರೆ ಉತ್ತರ ದೊರೆಯುತ್ತಿಲ್ಲ. ಇ–ಮೇಲ್ಗೆ ಸಂದೇಶ ಕಳುಹಿಸಿದರೂ ಪ್ರತಿಕ್ರಿಯೆ ಬರುವುದಿಲ್ಲ. ಕೆಇಎಯಿಂದ ನಡೆಸುವ ಬೇರೆಲ್ಲ ಪರೀಕ್ಷಾ ಅರ್ಜಿಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗುತ್ತದೆ. ಕೆ–ಸೆಟ್ಗೆ ಮಾತ್ರ ಮಲತಾಯಿ ಧೋರಣೆ ಸರಿಯೇ?
-ಸಾವಿತ್ರಿ ಮೇಗಾಡಿ, ಮುಧೋಳ
****
ಅಮೀಬಾ ಸೋಂಕು: ಮುನ್ನೆಚ್ಚರಿಕೆ ಬೇಕು
ಕೇರಳದಲ್ಲಿ ಮೆದುಳು ತಿನ್ನುವ ಮಾರಕ ಅಮೀಬಾ ಸೋಂಕಿಗೆ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕು ಹರಡುವ ಈ ಅಮೀಬಾವು ನಿಂತ ನೀರು, ಕೊಳ ಮತ್ತು ಸರೋವರದಲ್ಲಿನ ನೀರಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆ ನೀರಿನಲ್ಲಿ ಸ್ನಾನ ಮಾಡಿದಾಗ ಅಥವಾ ಈಜಿದಾಗ ಮೂಗಿನ ಮೂಲಕ ದೇಹ ಪ್ರವೇಶಿಸಿ ಮೆದುಳಿನ ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕದಲ್ಲಿ ಸೋಂಕು ಪತ್ತೆಯಾಗಿಲ್ಲ. ಆದರೆ, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ವಹಿಸುವುದು ಒಳಿತು.
-ಕಲ್ಪನಾ ಜಿ., ಬೆಂಗಳೂರು
****
ವೀಸಾ ಬಿಸಿತುಪ್ಪ: ಮಾತುಕತೆ ನಡೆಸಲಿ
‘ಅಮೆರಿಕವೇ ಮೊದಲು’ ಎನ್ನುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿ. ಭಾರತ ಸೇರಿ ಹಲವು ದೇಶಗಳ ಮೇಲೆ ಅವೈಜ್ಞಾನಿಕವಾಗಿ ಪ್ರತಿಸುಂಕ ಹೇರಿದ್ದ ಟ್ರಂಪ್ ಈಗ ಎಚ್–1ಬಿ ವೀಸಾ ಶುಲ್ಕ ಹೆಚ್ಚಿದ್ದಾರೆ. ಇದು ಭಾರತದ ಐ.ಟಿ ಉದ್ಯೋಗಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪ. ಐ.ಟಿ ವಲಯಕ್ಕೂ ಆತಂಕ. ಐ.ಟಿ ವಲಯವು ದೇಶದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು, ಈ ವಲಯದ ಭವಿಷ್ಯದ ದೃಷ್ಟಿಯಿಂದ ಟ್ರಂಪ್ ಆಡಳಿತದ ಜೊತೆಗೆ ಮಾತುಕತೆ ನಡೆಸುವುದು ಸೂಕ್ತ.
-ಕಾವ್ಯ ಕೆ., ತುಮಕೂರು
****
ಸಾರ್ವಜನಿಕ ಸಾರಿಗೆಗೆ ಉತ್ತೇಜನ ಅಗತ್ಯ
ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಇದೇ ವರ್ಷದ ಜನವರಿಯಲ್ಲಿ ಶೇ 15ರಷ್ಟು ಹೆಚ್ಚಿಸಲಾಗಿತ್ತು. ಹತ್ತು ವರ್ಷದ ಹಿಂದೆ ಇದ್ದ ಟಿಕೆಟ್ ದರ ಈಗ ದುಪ್ಪಟ್ಟಾಗಿದೆ. ದರ ಏರಿಕೆಯ ಬಗ್ಗೆ ಸುಳ್ಳು ಹೇಳುವ ಸರ್ಕಾರ, ಜನರಿಗೆ ಜ್ಞಾಪಕಶಕ್ತಿ ಇಲ್ಲವೆಂದು ಭಾವಿಸಿರಬೇಕು. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಬೇಕಾದ ಸರ್ಕಾರ, ಈ ಸೇವೆಯನ್ನು ಲಾಭ–ನಷ್ಟದ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ.
-ಮಧುಸೂದನ್ ಬಿ.ಎಸ್., ಬೆಂಗಳೂರು
****
ಬೆಳಗಿದ ಬಾನು!
ಈ ಭೂಮಿಗೂ
ಆ ಬಾನಿಗೂ
ಎಲ್ಲಿದೆ ಎಲ್ಲೆ?
ಅದೇನಿದ್ದರೂ
ನಮ್ಮ ನಮ್ಮಲ್ಲೇ!
-ಮ.ಗು. ಬಸವಣ್ಣ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.