ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯವಾಗುವಂತೆ ಹೂಗುಚ್ಛ, ಹೂವಿನ ಹಾರ ನಿಷೇಧದ ಆದೇಶ ಸರಿಯಾಗಿದೆ. ಇದರ ಬದಲಿಗೆ ಪುಸ್ತಕಗಳನ್ನು ಕೊಡುವ ಸಂಸ್ಕೃತಿ ಬೆಳೆಸುವುದು ಸ್ವಾಗತಾರ್ಹ. ಆದರೆ ಶಾಲು, ಹಣ್ಣಿನ ಬುಟ್ಟಿ ಯನ್ನು ನಿಷೇಧಿಸುವ ಆದೇಶ ಮರು ಪರಿಶೀಲಿಸಬಹುದು. ಇವು ಮರುಬಳಕೆಯಾಗುವಂತಹ ವಸ್ತುಗಳು ಹಾಗೂ ಹಣ್ಣು ಹಂಪಲು ಹಸಿವನ್ನು ನೀಗಿಸುವ ಆಹಾರ. ಆದರೆ ದಿನನಿತ್ಯ ಕಾರ್ಯಕ್ರಮಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಂದಂತಹ ಹೂಗುಚ್ಛ, ಹೂವಿನ ಹಾರ ಕೆಲವೇ ಗಂಟೆಗಳಲ್ಲಿ ಬಾಡಿಹೋಗಿ ಕಸದಬುಟ್ಟಿ ಸೇರುವುದು ಹಸಿದ ಹೊಟ್ಟೆಗಳಿಗೆ ನೋವಿನ ಸಂಗತಿ.
ಕೇವಲ ಉದ್ಯೋಗಾವಕಾಶಗಳನ್ನು ನೀಡುವ ಉದ್ದೇಶದಿಂದ ದುಂದು ವೆಚ್ಚ ಮಾಡುವುದರಲ್ಲಿ ಅರ್ಥವಿಲ್ಲ. ಇದಕ್ಕೂ ಮುಂಚೆ, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿದಂತಹ ಲಾಟರಿ ದಂಧೆ, ಮಟ್ಕಾ ದಂಧೆಯನ್ನು ನಿಷೇಧ ಮಾಡಿದಾಗ ಲಕ್ಷಾಂತರ ಜನ ಆ ಕ್ಷಣಕ್ಕೆ ಉದ್ಯೋಗ ಕಳೆದುಕೊಂಡರೂ ಬಳಿಕ ಬೇರೊಂದು ಉದ್ಯೋಗದಲ್ಲಿ ತೊಡಗಿರುತ್ತಾರೆ. ನಾವು ಮಾಡುವ ಉದ್ಯೋಗ ಅರ್ಥಪೂರ್ಣವಾಗಿದ್ದರೆ ಸಮಾಜಕ್ಕೆ ಒಳ್ಳೆಯದು.
-ಗೋಡೆ ಶಿವರಾಜ್,ಸಿರಿಗೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.