ADVERTISEMENT

ಏಕಮುಖ ವಿಶ್ವವಿದ್ಯಾಲಯಕ್ಕೆ ಮಣೆ ಏಕೆ?

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:10 IST
Last Updated 19 ಜನವರಿ 2022, 15:10 IST

ರಾಮನಗರದಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ₹ 359 ಕೋಟಿ ಬಿಡುಗಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ #ಸಂಸ್ಕೃತವಿವಿಬೇಡ ಎಂದು ಅಭಿಯಾನವನ್ನು ನಡೆಸಲಾಗಿ, ಇದು ಬಹಳಷ್ಟು ಟ್ರೆಂಡ್ ಆಗಿದೆ. ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ್ತ ಸರ್ಕಾರ ಬಹಳಷ್ಟು ಮಣೆ ಹಾಕುತ್ತಿರುವುದು ಸಹಜವಾಗಿ ಅನೇಕ ಕನ್ನಡಾಭಿಮಾನಿಗಳ ಕೋಪಕ್ಕೆ ತುತ್ತಾಗಿದೆ.

ರಾಜ್ಯ ಸರ್ಕಾರ ಸ್ಥಾಪಿಸಲು ಹೊರಟಿರುವ ಸಂಸ್ಕೃತ ವಿಶ್ವವಿದ್ಯಾಲಯವು ಇದೇ ಸರ್ಕಾರ ಹೆಚ್ಚು ಪ್ರಚಾರದ ಮೂಲಕ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- 2020ಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿದೆ. ಈ ನೀತಿ ಪ್ರಕಾರ, ಏಕಮುಖ ವಿಷಯಗಳನ್ನು ಬೋಧಿಸುವ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸದೆ ಈಗ ಇರುವಂತಹ ಏಕಮುಖ ವಿಷಯಗಳ ವಿಶ್ವವಿದ್ಯಾಲಯಗಳನ್ನು 2040ರ ವೇಳೆಗೆ ಬಹುಶಿಸ್ತೀಯ ವಿಶ್ವವಿದ್ಯಾಲಯಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದೆ. ಏಕಮುಖ ವಿಷಯಗಳ ವಿಶ್ವವಿದ್ಯಾಲಯ ಕುರಿತಾಗಿ ಹೊಸ ನೀತಿ ಹೀಗೆ ಹೇಳುತ್ತದೆ: ‘ಏಕಮುಖ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗುವುದು. ಇವೆಲ್ಲವೂ ಅತ್ಯಂತ ಚಲನಶೀಲವಾದ ಬಹುಶಿಸ್ತೀಯ ಸಂಸ್ಥೆಗಳಾಗುವತ್ತ ಮುಂದಡಿ ಇಡುತ್ತವೆ ಅಥವಾ ಚಲನಶೀಲ ಬಹುಶಿಸ್ತೀಯ ಎಚ್.ಇ.ಐ ಕ್ಲಸ್ಟರ್‌ಗಳ ಭಾಗವಾಗುತ್ತವೆ. ಇದರಿಂದ ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಗುಣಮಟ್ಟದ ಬಹುಶಿಸ್ತೀಯ ಮತ್ತು ಎಲ್ಲ ಶೈಕ್ಷಣಿಕ ವಿಭಾಗಗಳ ಬೋಧನೆ ಮತ್ತು ಸಂಶೋಧನೆ ಸಾಧ್ಯವಾಗುತ್ತದೆ ಮತ್ತು ಅದಕ್ಕೆ ಉತ್ತೇಜನ ನೀಡಲಾಗುತ್ತದೆ’.

ದೇಶದಲ್ಲೇ ಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲಿ ಜಾರಿಯಾಗುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೇ ಯಾವುದೇ ಏಕಮುಖ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುವುದಿಲ್ಲ ಎಂದು ನೀತಿ ನಿಯಮ ರೂಪಿಸಿ, ಈಗ ಏಕ ವಿಷಯದ ಸಂಸ್ಕೃತ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಸರ್ಕಾರ ತುದಿಗಾಲಲ್ಲಿ ನಿಂತಿರುವುದು ಏಕೆ ಎಂಬುದು ತಿಳಿಯದಾಗಿದೆ.

ADVERTISEMENT

ವಸಂತ ರಾಜು ಎನ್., ತಲಕಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.