ADVERTISEMENT

ಮೀಸಲು ನೀತಿ ಬದಲಾವಣೆಗೆ ಮುನ್ನ...

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:10 IST
Last Updated 9 ಸೆಪ್ಟೆಂಬರ್ 2020, 16:10 IST

ಪರಿಶಿಷ್ಟ ಜಾತಿಗಳು ‘ಏಕಸ್ವರೂಪಿ’ ಸಮುದಾಯವೇ ಎಂದು ವಾದಿರಾಜ್‌ ಅವರು ಕೇಳಿದ್ದಾರೆ (ಪ್ರ.ವಾ., ಸೆ. 9).
ಮಾನವಶಾಸ್ತ್ರೀಯ ನೆಲೆಯಿಂದ ಯಾವ ಸಮುದಾಯವೂ ಏಕಸ್ವರೂಪದಲ್ಲಿ ಇರುವುದಿಲ್ಲ...! ‘ಮೀಸಲಾತಿ ನೀತಿ’ ಬರೀ ಮಾನವಶಾಸ್ತ್ರೀಯ ವಿಶ್ಲೇಷಣೆ ಆಧರಿಸಿಲ್ಲ. ಬದಲಾಗಿ, ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ
ಸ್ಥಿತಿಗತಿಯನ್ನು ಆಧರಿಸಿದೆ. ‘ಮೀಸಲು ನೀತಿ’ಯಲ್ಲಿ ಖಂಡಿತ ಬದಲಾವಣೆ ಆಗಬೇಕು. ಆ ಬದಲಾವಣೆಗೆ ಮೊದಲು, ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀತಿ ಜಾರಿಯಾಗಬೇಕು. ಮುಖ್ಯವಾಗಿ, ಖಾಸಗಿ ವಲಯಗಳಿಗೆ ಮೀಸಲಾತಿಯನ್ನು ವಿಸ್ತರಿಸಬೇಕು ಎಂಬ ದಿಕ್ಕಿನಿಂದ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ಸಾಂವಿಧಾನಿಕ ತಿದ್ದುಪಡಿಯ ಬೇಡಿಕೆ ನಮ್ಮ ಆದ್ಯತೆಯಾಗಬೇಕು. ಈ ಬದಲಾವಣೆ ಆದಾಗ ‘ಪೂಲ್ ಆಫ್ ಆಪರ್ಚುನಿಟಿ’ ಸೃಷ್ಟಿ ಆಗುತ್ತದೆ. ಆಗ ಒಳಮೀಸಲಾತಿ ಕುರಿತ ಚರ್ಚೆಯು ರಚನಾತ್ಮಕ ಮತ್ತು ಇನ್‌ಕ್ಲೂಸಿವ್‌ ಸ್ವರೂಪ ಹೊಂದುತ್ತದೆ‌‌.

ಲೇಖಕರ ವಾದವನ್ನೇ ಆಧರಿಸಿ ವಾದಿಸುವುದಾದರೆ, ಆರ್ಥಿಕ ಮಾನದಂಡದ ಆಧಾರದ ಮೇಲೆ ಕೊಟ್ಟಿರುವ
ಶೇ 10ರಷ್ಟು ಮೀಸಲಾತಿ ಅಡಿಯಲ್ಲಿ ಬರುವ ಎಲ್ಲಾ ಜಾತಿಗಳು ಏಕಸ್ವರೂಪದಲ್ಲಿ ಇರಲು ಸಾಧ್ಯವಿಲ್ಲ. ಮೇಲಾಗಿ, ಈಗ ಅವರಿಗೆ ಕೊಟ್ಟಿರುವ ಮೀಸಲಾತಿ ‘ಆರ್ಥಿಕ ಹಿನ್ನಡೆ’ಯ ಕಾರಣಕ್ಕಾಗಿಯೇ ವಿನಾ ಮಾನವಶಾಸ್ತ್ರೀಯ ವಿಶ್ಲೇಷಣೆಯ ಕಾರಣಕ್ಕಲ್ಲ. ಲೇಖಕರು ಇದೇ ತರ್ಕ ಬಳಸಿ ಆ ವಿಷಯದಲ್ಲಿಯೂ ಒಳಮೀಸಲಾತಿ ಒದಗಿಸಬೇಕು ಎಂಬ ವಾದವನ್ನು ಮಂಡಿಸಲು ತಯಾರಿದ್ದಾರೆಯೇ ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.

-ಡಾ. ಕಿರಣ್‌ ಎಂ. ಗಾಜನೂರು,ಕಲಬುರ್ಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.