ಮಾಸಾಶನಕ್ಕೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಶೀಘ್ರವೇ ರದ್ದು ಮಾಡಲು ಕಂದಾಯ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಆಧಾರ್ ಕಾರ್ಡ್ನಲ್ಲಿರುವ ವಯಸ್ಸನ್ನು ಆಧರಿಸಿ ಬೋಗಸ್ ಖಾತೆಗಳನ್ನು ಪತ್ತೆ ಹಚ್ಚಲು ನಿರ್ಧರಿಸಿರುವುದು ಸೂಕ್ತವಲ್ಲ. ಕೆಲವರು ಆಧಾರ್ ಕಾರ್ಡ್ನಲ್ಲಿ ನಮೂದಿಸುವ ವಯಸ್ಸಿಗೂ ಅವರ ನಿಜವಾದ ವಯಸ್ಸಿಗೂ ಅಂತರವಿರುತ್ತದೆ. ಅಲ್ಲದೆ ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸದ ತಪ್ಪು ಮಾಹಿತಿಗಳು ನಮೂದಾಗಿರುತ್ತವೆ. ಆಧಾರ್ ತಿದ್ದುಪಡಿ ಕೇಂದ್ರಗಳಲ್ಲಿ ದಿನವೆಲ್ಲ ಕಾದು ಕುಳಿತರೂ ತಿದ್ದುಪಡಿ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಆಧಾರ್ನಲ್ಲಿ ನಮೂದಾಗಿರುವ ವಯಸ್ಸನ್ನು ಆಧರಿಸಿ ಮಾಸಾಶನ ರದ್ದು ಮಾಡುವ ತೀರ್ಮಾನ ಸರಿಯಲ್ಲ.
ಬದಲಿಗೆ ಆಸ್ತಿ, ಉದ್ಯೋಗ, ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ, ವಯಸ್ಸನ್ನು ಬೇರೊಂದುಮಾನದಂಡ ಆಧರಿಸಿ ಕಂಡುಹಿಡಿದಲ್ಲಿ ನಿಜವಾದ ಫಲಾನುಭವಿಗಳಿಗೆ ಆಗುವ ಅನ್ಯಾಯ ತಡೆಯಬಹುದು. ಲಾಕ್ಡೌನ್ ಸಂದರ್ಭದಲ್ಲಿ ವೃದ್ಧರಿಗೆ ಧೈರ್ಯ ತುಂಬಿದ್ದು ವೃದ್ಧಾಪ್ಯ ವೇತನ ಎಂಬುದನ್ನು ಮರೆಯುವಂತಿಲ್ಲ. ಆಧಾರ್ ತಿದ್ದುಪಡಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಿ, ಕಾಲಾವಕಾಶ ನೀಡಲಿ. ಆತುರದ ತೀರ್ಮಾನ ತರವಲ್ಲ.
- ಶಿವಕುಮಾರ್ ಯರಗಟ್ಟಿಹಳ್ಳಿ,ಚನ್ನಗಿರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.