ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ಕಡಿಮೆ ಅಂಕ ಪಡೆದವರಲ್ಲಿ ಕೆಲವರು ಜೀವವನ್ನೇ ಬಲಿ ಕೊಟ್ಟ ಸುದ್ದಿಗಳು ವರದಿಯಾಗಿವೆ. ಮಕ್ಕಳು ಪಡೆದ ಅಂಕಕ್ಕಿಂತ ಹೆಚ್ಚು ಹೇಳಿಕೊಳ್ಳುವ ಪಾಲಕರು, ಚೆನ್ನಾಗಿ ಬರೆದರೂ ಕಡಿಮೆ ಅಂಕ ಬಂದಿದೆ ಎನ್ನುವ ಕೆಲ ಪರೀಕ್ಷಾರ್ಥಿಗಳು, ಮಗಳೋ ಮಗನೋ ಅನುತ್ತೀರ್ಣರಾದ ಕಾರಣಕ್ಕೆ ಎಷ್ಟೋ ದಿನ ಮನೆಯ ಮೆಟ್ಟಿಲನ್ನೇ ಇಳಿಯದ ತಂದೆ–ತಾಯಿ... ಪ್ರತೀ ವರ್ಷ ಫಲಿತಾಂಶ ಪ್ರಕಟವಾದಾಗ ಇಂತಹ ಸಂಗತಿಗಳು ಕಂಡುಬರುತ್ತವೆ. ನಡೆದದ್ದು ಪಿಯು ಪರೀಕ್ಷೆಯೇ ಹೊರತು ಬದುಕಿನ ಪರೀಕ್ಷೆಯಲ್ಲ!
ಇವೆಲ್ಲದರ ನಡುವೆ, ಈ ಬಾರಿ ಅಂಕದ ಪರದೆ ಸರಿದ ಮೇಲೆ ಬಂದ ಅನುಷಾಳ ಅಂಕ ನಮ್ಮನ್ನೆಲ್ಲ ಭಾವುಕರನ್ನಾಗಿ ಮಾಡಿದ್ದಂತೂ ನಿಜ. ಚನ್ನಗಿರಿ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದ ಕೃಷಿಕ ದಂಪತಿಯ ಪುತ್ರಿ ಅನುಷಾ, ಕೊನೆಯದಾಗಿ ನಡೆದ ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಬರೆಯುವ ಮೊದಲೇ ಕ್ಯಾನ್ಸರ್ನಿಂದ ಮೃತಪಟ್ಟಿದ್ದಳು. ನಂತರ ಪ್ರಕಟವಾದ ಫಲಿತಾಂಶದಲ್ಲಿ ಆಕೆಗೆ ಇಂಗ್ಲಿಷ್ ಹೊರತುಪಡಿಸಿ ಶೇ 93.4ರಷ್ಟು ಅಂಕಗಳು ಬಂದಿವೆ. ಆದರೆ ಅದನ್ನು ಸಂಭ್ರಮಿಸಲು ಅನುಷಾಳೇ ಇಲ್ಲ. ಮಕ್ಕಳು ಕಡಿಮೆ ಅಂಕ ಪಡೆದಿರುವುದನ್ನು ಕಂಡು ಮರುಗುತ್ತಿರುವ ಪಾಲಕರು, ಅಂಕಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಬೇಡ.
– ಬೀರಣ್ಣ ನಾಯಕ ಮೊಗಟಾ,ಯಲ್ಲಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.