ಜನದಟ್ಟಣೆಯಿಂದ, ಲಕ್ಷಾಂತರ ವಾಹನಗಳು ಉಗುಳುವ ಹೊಗೆಯಿಂದ, ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯದಿಂದ ಮತ್ತು ಕಟ್ಟಡ ಉದ್ದಿಮೆಯೆಂಬ ಬ್ರಹ್ಮರಾಕ್ಷಸ ಸ್ವರೂಪದ ಬೆಳವಣಿಗೆಗಳಿಂದ ಉದ್ಯಾನನಗರಿ ಬೆಂಗಳೂರು ಬವಣೆಪಡುತ್ತಿದೆ. ಒಂದು ಪ್ರದೇಶದ ಪರಿಸರ ಸುಸ್ಥಿರತೆಯನ್ನು ಮಾಪನ ಮಾಡಲು ಪರಿಸರ ವಿಜ್ಞಾನದಲ್ಲಿ ‘ಧಾರಣಾ ಸಾಮರ್ಥ್ಯ’ ಎಂಬ ಮಾನದಂಡವನ್ನು ಬಳಸಲಾಗುತ್ತದೆ. ಆ ಧಾರಣಾ ಸಾಮರ್ಥ್ಯವನ್ನು ಈಗಾಗಲೇ ಮೀರಿ ಬೆಂಗಳೂರು ಬೆಳೆಯುತ್ತಿದೆ. ಇದನ್ನು ತಡೆದು, ಬೆಂಗಳೂರೇ ಕರ್ನಾಟಕವಲ್ಲ ಎಂಬುದನ್ನು ಅರಿತು, ಕೋಲಾರ, ತುಮಕೂರು, ಮಂಡ್ಯದಂತಹ ಅಕ್ಕಪಕ್ಕದ ನಗರಗಳನ್ನು ಬೆಳೆಸಲು ಸರ್ಕಾರ ಆದ್ಯತೆ ನೀಡಬೇಕಾಗಿದೆ. ಆದರೆ ಅದರ ಬದಲು, ರಾಜಧಾನಿಯನ್ನೇ ಬೆಳೆಸಲು ಮುಂದಾಗಿರುವುದು ದುರ್ದೈವ.
ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ, ಜನದಟ್ಟಣೆಯ ಆನಂದರಾವ್ ವೃತ್ತದ ಬಳಿ ₹ 1,250 ಕೋಟಿ ಅಂದಾಜು ವೆಚ್ಚದಲ್ಲಿ 50 ಮಹಡಿಗಳ ಅವಳಿ ಗೋಪುರ ಕಟ್ಟಡ ನಿರ್ಮಿಸುವ ಯೋಜನೆಯು ಬೆಂಗಳೂರಿನ ಪರಿಸರಕ್ಕೆ, ಅದರ ಸುಸ್ಥಿರ ಬೆಳವಣಿಗೆಗೆ ಹೊಡೆತ ನೀಡುತ್ತದೆ. ಈ ಬಗ್ಗೆ ಸರ್ಕಾರವು ವಿವೇಕದಿಂದ ಮರುಚಿಂತಿಸಬೇಕು.
-ಟಿ.ಆರ್.ಚಂದ್ರಶೇಖರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.