ತೆಲಂಗಾಣ ಮುಖ್ಯಮಂತ್ರಿ ನಿವಾಸದ ನಾಯಿ ಮೃತಪಟ್ಟಿದ್ದರಿಂದ, ಇಬ್ಬರು ಪಶುವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ (ಪ್ರ.ವಾ., ಸೆ. 16). ಚಿಕಿತ್ಸೆ ನೀಡುವಲ್ಲಿ ಪಶುವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ನಾಯಿ ಮೃತಪಟ್ಟಿದೆ ಎಂಬ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿಯವರಿಗೆ ನಾಯಿಯ ಮೇಲೆ ಅಪಾರ ಪ್ರೀತಿ ಇರುವುದು ಮೆಚ್ಚತಕ್ಕ ಸಂಗತಿ. ಆದರೆ, ಈ ನಾಯಿಯನ್ನು ನೋಡಿಕೊಳ್ಳಲು ಒಬ್ಬ ಉಸ್ತುವಾರಿ ಹಾಗೂ ಚಿಕಿತ್ಸೆಗಾಗಿ ಇಬ್ಬರು ಪಶು ವೈದ್ಯರನ್ನು ನೇಮಿಸಿದಂತೆಯೇ ಪ್ರಜೆಗಳ ಹಿತರಕ್ಷಣೆಯನ್ನೂ ಅವರು ಅಷ್ಟೇ ಆಸ್ಥೆಯಿಂದ ಮಾಡಬೇಕು.
ತಮ್ಮ ನಾಯಿ ಸತ್ತಾಗ, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ನೆನಪಾದಂತೆಯೇ, ಮನುಷ್ಯರು ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಂಡಾಗಲೂ, ಅವರ ಹಕ್ಕು- ಗೌರವಗಳಿಗೆ ಅಡ್ಡಿ, ಆತಂಕ ಎದುರಾದಾಗಲೂ ಕಾನೂನು, ಸಂವಿಧಾನ, ಮಾನವ ಹಕ್ಕುಗಳು ನೆನಪಾಗಲಿ. ಜವಾಬ್ದಾರಿ ಮರೆಯುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಇದೇ ರೀತಿ ಕಠಿಣ ಕ್ರಮ ಕೈಗೊಳ್ಳಲಿ.
-ಎಂ.ಮಾದೇಶ್ ಹೊಸೂರು,ಹಾಡ್ಲಿ, ಮಳವಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.