ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಲಾರಿ ಅಪಘಾತವಾಗಿ ಮಗುಚಿ ಬಿದ್ದಿತ್ತು. ಅಲ್ಲಿ ಸೇರಿದ ಜನರು ಚಾಲಕ, ಕ್ಲೀನರ್ ಅವರನ್ನು ರಕ್ಷಣೆ ಮಾಡುವುದು ಬಿಟ್ಟು, ಲಾರಿಯಲ್ಲಿ ಇದ್ದ ಸೋಪು, ಶಾಂಪೂ ಮತ್ತಿತರ ವಸ್ತುಗಳನ್ನು ಎಷ್ಟು ಸಿಗುತ್ತದೋ ಅಷ್ಟನ್ನು ಎತ್ತಿಕೊಂಡು ಓಡುತ್ತಿದ್ದರು. ಮತ್ತೊಮ್ಮೆ, ಪೆಟ್ರೋಲ್ ತುಂಬಿದ ಲಾರಿ ಮಗುಚಿದಾಗ ಜನರು ಅಪಾಯ ಲೆಕ್ಕಿಸದೆ, ಮನೆಯಲ್ಲಿನ ಪಾತ್ರೆ, ಚೊಂಬು, ಬಕೆಟ್ನಲ್ಲಿ ಸಿಕ್ಕಷ್ಟು ಪೆಟ್ರೋಲ್ ತುಂಬಿಸಿಕೊಂಡು ಓಡುತ್ತಿದ್ದರು.
ಇತ್ತೀಚೆಗೆ ರಾಜ್ಯದಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ ಪರಿ ನೋಡಿ ಈ ಘಟನೆಗಳು ನೆನಪಿಗೆ ಬಂದವು. ರಾಜ್ಯದ ಜನರು ಕೋವಿಡ್, ನೆರೆ ಹಾವಳಿ, ಬೆಲೆ ಏರಿಕೆ, ನಿರುದ್ಯೋಗದಂತಹ ಆಘಾತಗಳಿಂದ ಒದ್ದಾಡುತ್ತಿರುವಾಗ
ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಾ, ಸಿಕ್ಕರೆ ಸಾಕೆಂದು ಅವಸರಪಡುತ್ತಾ ಪರದಾಡುತ್ತಿದ್ದರು. ಸ್ಥಾನ ಸಿಕ್ಕವರಿಗೆ ಒಳಗೊಳಗೆ ಒಂದಿಷ್ಟು ಖುಷಿ, ಸಿಗದಿದ್ದವರ ಅಪಾರ ದುಃಖ ನೋಡಿ ರಾಜ್ಯದ ಜನ ಮುಸಿ ಮುಸಿ ನಗುತ್ತಿದ್ದರು. ಜನರ ಸೇವೆ ಮಾಡಲು ಲಾಬಿ ಮಾಡಿ ಸಚಿವರಾಗಬೇಕೇ ಎಂಬ ಪ್ರಶ್ನೆ ಮತದಾರನನ್ನು ಸದಾ ಕಾಡುತ್ತಲೇ ಇರುತ್ತದೆ.
-ವಿ.ತಿಪ್ಪೇಸ್ವಾಮಿ,ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.