ಹೆಚ್ಚುತ್ತಿರುವ ರಸ್ತೆ ಅಪಘಾತ ತಡೆಯಲು ಕೇಂದ್ರ ಸರ್ಕಾರ ಹೊಸ ಸಾರಿಗೆ ನೀತಿ ಜಾರಿಗೊಳಿಸಿರುವುದೇನೋ ಸರಿ. ದಂಡ ಹೆಚ್ಚಿಸಿರುವುದರ ಪರವಾಗಿ ಹಾಗೂ ವಿರುದ್ಧವಾಗಿ ಚರ್ಚೆಗಳು ನಡೆಯುತ್ತಿವೆ. ದಂಡವೊಂದರಿಂದಲೇ ಎಲ್ಲವನ್ನೂ ಸರಿಪಡಿಸಲು, ಶಿಸ್ತು ಮೂಡಿಸಲು ಸಾಧ್ಯವಿಲ್ಲ. ದಂಡದ ಜೊತೆಗೆ ಸ್ನೇಹಮಯಿ ನೀತಿಯೂ ಬೇಕು.
ಇಂದಿಗೂ ಎಷ್ಟೋ ಮಂದಿ ಚಾಲನಾ ಪರವಾನಗಿ (ಡಿ.ಎಲ್) ಮಾಡಿಸಿಕೊಳ್ಳಲಾಗದ ಸ್ಥಿತಿ ಇದೆ. ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟತೆ, ಹತ್ತಾರು ಸಲ ಅಲೆಯಬೇಕಾದ ಸ್ಥಿತಿ, ಉಸಿರು ಕಟ್ಟಿಸುವ ಆಡಳಿತ ನೀತಿಯೇ ಇದಕ್ಕೆಲ್ಲ ಕಾರಣ. ಡಿ.ಎಲ್ ಪಡೆಯಲು ನಿಯಮಗಳನ್ನು ಬಿಗಿಗೊಳಿಸಲಿ. ಆದರೆ, ಆ ನಿಯಮಗಳನ್ನು ಪಾಲಿಸುವವರಿಗೆ ಸುಲಭವಾಗಿ ಡಿ.ಎಲ್ ದೊರೆಯುವಂತೆ ಮಾಡಬೇಕು. ಪರೀಕ್ಷೆಗೆ ಒಳಪಡಿಸಿ,ಸ್ಥಳದಲ್ಲೇ ಅದನ್ನು ಮಾಡಿಸಿಕೊಡುವ ವ್ಯವಸ್ಥೆ ಮಾಡಲಿ. ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಸಾರುವ ಆಂದೋಲನಗಳು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿ. ನಿಯಮಗಳಿಗೆ ಬದ್ಧರಾಗಿರುವಂತೆಜನರನ್ನು ಅಣಿಗೊಳಿಸುವುದು ಕೂಡ ಸರ್ಕಾರದ ಮಹತ್ವದ ಕೆಲಸಗಳಲ್ಲಿ ಒಂದು.
–ಬಲ್ಲೇನಹಳ್ಳಿ ಮಂಜುನಾಥ್,ಕೆ.ಆರ್.ಪೇಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.