‘ಗ್ರೇಟರ್’ ಹುಚ್ಚು; ಪರಂಪರೆಗೆ ಕುತ್ತು
ಮೈಸೂರು ‘ಪಾರಂಪರಿಕ ನಗರ’ ಎಂದೇ ಹೆಸರುವಾಸಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೈಸೂರು ಕೂಡ ಬೆಂಗಳೂರು ರೀತಿಯಲ್ಲಿಯೇ ಅಳತೆ ಮೀರಿ ಬೆಳೆಯುತ್ತಿರುವುದು ಅದರ ಪಾರಂಪರಿಕತೆಗೆ ಧಕ್ಕೆ ತರುತ್ತಿದೆ. ಈಗ ರಾಜ್ಯ ಸರ್ಕಾರ ‘ಗ್ರೇಟರ್ ಮೈಸೂರು’ ಮಾಡಲು ಮುಂದಾಗಿದೆ ಎಂಬ ಸುದ್ದಿಯಿದೆ. ಇದರಿಂದ ಹೊಸ ಉದ್ಯಮಗಳು ತಲೆಎತ್ತಿ ಪರಿಸರ ಮಾಲಿನ್ಯ ಹೆಚ್ಚಲಿದೆ. ಹೊಸ ಕಟ್ಟಡಗಳು ತಲೆಎತ್ತಲಿವೆ. ಜನಸಂಖ್ಯೆ ಹೆಚ್ಚಾಗಿ ಪಾರಂಪರಿಕ ನಗರ ಎಂಬ ಖ್ಯಾತಿ ಕಳಚಿಬೀಳುವ ಅಪಾಯವಿದೆ. ಮೈಸೂರನ್ನು ಮತ್ತೊಂದು ಬೆಂಗಳೂರು ಮಾಡುವುದಷ್ಟೇ ಸರ್ಕಾರದ ಇರಾದೆ; ಪರಂಪರೆ ಉಳಿಸುವ ಇಶಾರೆ ಇರುವಂತಿಲ್ಲ.
⇒ಸಿ. ಸಿದ್ದರಾಜು ಆಲಕೆರೆ, ಮಂಡ್ಯ
ತುಮಕೂರು ವಿ.ವಿ ಸೌಜನ್ಯ ಮರೆಯಿತೆ?
ತುಮಕೂರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ, ವಿಶ್ವವಿದ್ಯಾಲಯ ರೂಪುಗೊಳ್ಳುವುದಕ್ಕಿಂತ ಮುಂಚೆ ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ತುಮಕೂರು ಸ್ನಾತಕೋತ್ತರ ಕೇಂದ್ರ ಇತ್ತು. ಇದು ರೂಪುಗೊಳ್ಳುವುದಕ್ಕೆ ನಾಡೋಜ ಬರಗೂರು ರಾಮಚಂದ್ರಪ್ಪನವರ ಅಪಾರ ಶ್ರಮವಿದೆ. ಇದನ್ನು ವಿ.ವಿ ಆಡಳಿತ ಮಂಡಳಿ ಮರೆಯಬಾರದು. ಸ್ನಾತಕೋತ್ತರ ಕೇಂದ್ರದ ಮೊದಲ ನಿರ್ದೇಶಕರಿಂದ ಹಿಡಿದು ವಿ.ವಿಯ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಸೌಜನ್ಯಕ್ಕಾದರೂ ಆಹ್ವಾನಿಸದಿರುವುದು ಸರಿಯಲ್ಲ.
⇒ಸೋಮಶೇಖರ್, ಕದಿರೇಹಳ್ಳಿ
ಗ್ರಾಹಕರ ನಂಬಿಕೆಗೆ ಬರೆ ಎಳೆದ ‘ನಂದಿನಿ’
ಕರ್ನಾಟಕ ಹಾಲು ಮಹಾಮಂಡಳವು ‘ನಂದಿನಿ’ ತುಪ್ಪ ಮತ್ತು ಬೆಣ್ಣೆಯ ದರ ಏರಿಕೆ ಮಾಡಿದೆ. ಈ ದರ ಏರಿಕೆಯ ಬಿಸಿತಾಳದೆ ಗ್ರಾಹಕರು ಬೇರೆ ಸಂಸ್ಥೆಗಳ ಹೈನು ಉತ್ಪನ್ನಗಳತ್ತ ಮೊರೆ ಹೋಗುವ ಸಾಧ್ಯತೆಯಿದೆ. ಆಗ ಲಾಭದ ಬದಲಿಗೆ ಕೆಎಂಎಫ್ ನಷ್ಟ ಅನುಭವಿಸಬೇಕಾಗುತ್ತದೆ. ಗ್ರಾಹಕರ ನಂಬಿಕೆ ಗಳಿಸಿದ ಮೇಲೆ ಅವರಿಗೆ ಬರೆ ಹಾಕುವುದು ಸರಿಯಾದ ನಡೆಯಲ್ಲ.
⇒ಬಾಲಕೃಷ್ಣ ಎಂ.ಆರ್., ಬೆಂಗಳೂರು
ಅನ್ನದಾತರ ಹಿತಾಸಕ್ತಿ ಮರೆತ ಸರ್ಕಾರ
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬೆಳೆಗಾರರು ನಡೆಸುತ್ತಿರುವ ಹೋರಾಟ ಎರಡನೇ ವಾರಕ್ಕೆ ಕಾಲಿಟ್ಟಿದೆ. ಆದರೂ, ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿರುವುದು ದಿವ್ಯ ನಿರ್ಲಕ್ಷ್ಯವೇ ಸರಿ. ಅನ್ನದಾತ ದೇಶದ ಬೆನ್ನೆಲುಬು ಎಂಬ ಮಾತು ಕಾಗದಕಷ್ಟೆ ಸೀಮಿತವಾಗಿದೆ. ರೈತ ಬೆಳೆಯುವ ಫಸಲಿಗೆ ಉತ್ತಮ ಬೆಲೆ ದೊರಕಿಸಿಕೊಡುವುದು ಸರ್ಕಾರದ ಕರ್ತವ್ಯ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಸಮುದಾಯ ಇನ್ನಿಲ್ಲದಂತೆ ಹೈರಾಣಾಗಿದೆ. ಅನ್ನದಾತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುವ ಸರ್ಕಾರಗಳು, ರೈತಸ್ನೇಹಿಯಾಗಿ ನಡೆದುಕೊಳ್ಳಬೇಕಿದೆ.
⇒ರಾಮಚಂದ್ರ ಮಂಚಲದೊರೆ, ಗುಬ್ಬಿ
ಬಸ್ ಪ್ರಯಾಣಿಕರಿಗೆ ಊಟದ ಹೊರೆ!
ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಇತ್ತೀಚೆಗೆ ಪ್ರಯಾಣಿಸಿದೆ. ರಾತ್ರಿ ಊಟಕ್ಕಾಗಿ ಖಾಸಗಿ ಹೋಟೆಲ್ ಬಳಿ ಬಸ್ ನಿಲ್ಲಿಸಲಾಯಿತು. ಅಲ್ಲಿ ಎರಡು ರೊಟ್ಟಿಗೆ ₹150; ಒಂದು ಕಪ್ ಕಾಫಿಗೆ ₹35 ತೆರಬೇಕಾಯಿತು. ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವವರು ಹೆಚ್ಚು ಮಂದಿ ಬಡ ಮತ್ತು ಕೆಳಮಧ್ಯಮ ವರ್ಗದವರು. ಇಂತಹ ಪ್ರಯಾಣಿಕರು ಒಂದು ಊಟಕ್ಕಾಗಿ ದುಬಾರಿ ಬೆಲೆ ತೆರಬೇಕಾಗಿದೆ.ಇದೊಂದು ರೀತಿಯಲ್ಲಿ ‘ಮೂಗಿಗಿಂತ ಮೂಗುತಿ ಭಾರ’ ಎನ್ನುವಂತಾಗಿದೆ. ಈ ಬಗ್ಗೆ ಕಂಡಕ್ಟರ್ ಅವರನ್ನು ಪ್ರಶ್ನಿಸಿದೆ. ಮೇಲಧಿಕಾರಿಗಳು ಸೂಚಿಸಿದ ಹೋಟೆಲ್ ಬಳಿ ಬಸ್ ನಿಲ್ಲಿಸಬೇಕು; ಇಲ್ಲದಿದ್ದರೆ ಅಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾಗುತ್ತದೆ ಎಂದು ಉತ್ತರಿಸಿದರು. ಇಲ್ಲಿ ಹೋಟೆಲ್ ಮಾಲೀಕರು ಮತ್ತು ಸಾರಿಗೆ ನಿಗಮದ ಮೇಲಧಿಕಾರಿಗಳ ನಡುವೆ ಅಪವಿತ್ರ ಮೈತ್ರಿ ಇರುವಂತಿದೆ. ಸಾರಿಗೆ ಸಚಿವರು ಈ ಬಗ್ಗೆ ಕ್ರಮಕೈಗೊಳ್ಳಲಿ.
⇒ಸರ್ಜಾಶಂಕರ ಹರಳಿಮಠ, ಶಿವಮೊಗ್ಗ
ಮೌಲಿಕ, ಸದಭಿರುಚಿ ಸಿನಿಮಾಗಳ ಕಣ್ಮರೆ
ಇತ್ತೀಚೆಗೆ ‘ಪ್ಯಾನ್ ಇಂಡಿಯಾ’ ಮಾದರಿಯಲ್ಲಿ ಕನ್ನಡದ ಸಿನಿಮಾಗಳು ಅದ್ದೂರಿ ತಾರಾಗಣದೊಂದಿಗೆ ತೆರೆಕಾಣುತ್ತಿವೆ. ಸಂಖ್ಯೆಯ ದೃಷ್ಟಿಯಿಂದ ಕನ್ನಡದ ಚಿತ್ರಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿದ್ದರೂ ಗುಣಮಟ್ಟದ ದೃಷ್ಟಿಯಿಂದ ಇದೇ ಮಾತನ್ನು ಹೇಳುವಂತಿಲ್ಲ. ಪ್ರಸ್ತುತ ಬಿಡುಗಡೆಯಾಗುತ್ತಿರುವ ಬಹುತೇಕ ಚಿತ್ರಗಳು ಹೊಡಿ–ಬಡಿ ಸಂಸ್ಕೃತಿಯ ಸುತ್ತಲೇ ತಿರುಗುತ್ತಿವೆ. ಹಿಂಸಾಚಾರ, ಅಶ್ಲೀಲತೆ ಮುಂತಾದ ನಕಾರಾತ್ಮಕ ಅಂಶಗಳೇ ಚಿತ್ರಗಳಲ್ಲಿ ಹಾಸುಹೊಕ್ಕಾಗಿರುತ್ತವೆ. ಬೆರಳೆಣಿಕೆಯಷ್ಟಾದರೂ ಗುಣಮಟ್ಟದ ಚಿತ್ರಗಳು ತೆರೆಕಾಣುತ್ತಿರುವುದು ಸ್ವಲ್ಪಮಟ್ಟಿಗೆ ನೆಮ್ಮದಿ ತರುವ ವಿಚಾರ.
ವರನಟ ರಾಜ್ಕುಮಾರ್ ನಟನೆಯ ‘ಬಂಗಾರದ ಮನುಷ್ಯ’ ಸಿನಿಮಾ ಮೂಡಿಸಿದ ಹೆಜ್ಜೆಗುರುತುಗಳು ಸಾರ್ವಕಾಲಿಕ ದಾಖಲೆಯಾಗಿದೆ. ಅಂತಹ ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ನಿರ್ದೇಶಕರು, ನಿರ್ಮಾಪಕರು ಮುಂದಾಗಲಿ. ಹಾಗಾದಾಗ ಮಾತ್ರ ‘ಸಾಮಾಜಿಕ ಮೌಲ್ಯ ಹೆಚ್ಚಿಸುವಂತಹ ಸಿನಿಮಾಗಳು ನಿರ್ಮಾಣವಾಗಲಿ’ ಎಂದು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ ಮಾತಿಗೆ ಅರ್ಥ ಬರುತ್ತದೆ.
⇒ಕೆ.ವಿ. ವಾಸು, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.