ADVERTISEMENT

ಹಬ್ಬದ ಮಹತ್ವ ಅರಿಯಿರಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಏಪ್ರಿಲ್ 2021, 19:31 IST
Last Updated 16 ಏಪ್ರಿಲ್ 2021, 19:31 IST

ಯುಗಾದಿ ಸಂದರ್ಭದಲ್ಲಿ ರತ್ನ ಪಕ್ಷಿ ಅಥವಾ ಸಾಂಬಾರ್ ಕಾಗೆಯನ್ನು ನೋಡಲು ಜನ ತಂಡೋಪತಂಡವಾಗಿ ಹೊಲಗದ್ದೆಗಳಿಗೆ ಹೋಗುವುದನ್ನು ಕಾಣುತ್ತೇವೆ. ಅದೇ ರೀತಿ ಬೇವಿನ ಹೂಗಳು, ಎಲೆಗಳು ಬೇಕೇಬೇಕಾಗಿರುವುದರಿಂದ ಆ ದಿನ ಬೇವಿನ ಮರಕ್ಕೆ ಮುಗಿಬೀಳುವವರ ಸಂಖ್ಯೆಯೂ ಕಡಿಮೆ ಇಲ್ಲ. ಆಚರಣೆಗಳು ತಪ್ಪಲ್ಲ, ಆದರೆ ಮೂಲ ಉದ್ದೇಶವನ್ನೇ ಮರೆತರೆ? ರತ್ನ ಪಕ್ಷಿಯು ಇತರ ಪಕ್ಷಿಗಳಿಗಿಂತ ತುಸು ದುರ್ಬಲ. ಹೀಗಾಗಿ ಅದು ಅತಿ ಸುಲಭವಾಗಿ ಬೇಟೆಗಾರರಿಗೆ ಬಲಿಯಾಗುತ್ತದೆ. ಬಹುಶಃ ಇದರ ಅರಿವಿದ್ದ ನಮ್ಮ ಪೂರ್ವಜರು ಇದರ ಸಂರಕ್ಷಣೆಗಾಗಿ ಇಂತಹದ್ದೊಂದು ಆಚರಣೆ ತಂದಿದ್ದಿರಬಹುದೇನೋ. ಆದರೆ ಈ ಪಕ್ಷಿ ನಿಜಕ್ಕೂ ಈಗ ಅಪಾಯದ ಅಂಚಿನಲ್ಲಿದೆ.‌ ಇದರ ಗೂಡನ್ನು ಹುಡುಕಿ, ಮೊಟ್ಟೆ, ಮರಿಗಳ ಗೋಣು ಮುರಿದು ಬಿಸಾಡುವ ವಿಕೃತ ಮೂಢನಂಬಿಕೆ ಜೀವಂತವಾಗಿದೆ. ಜೊತೆಗೆ ಇದರ ದೇಹದಲ್ಲಿ ಔಷಧೀಯ ಗುಣಗಳಿವೆ ಎಂದೋ ಅಥವಾ ಇನ್ನಾವುದೋ ಮೌಢ್ಯಕ್ಕೆ ಒಳಗಾಗಿ ಈನಿರುಪದ್ರವಿಯನ್ನು ಬೇಟೆಯಾಡಲಾಗುತ್ತಿದೆ.

ಅಳಿವಿನ ಅಂಚಿನಲ್ಲಿರುವ ರತ್ನ ಪಕ್ಷಿಯ ಬೇಟೆಯನ್ನು ಸಾರ್ವಜನಿಕರು ಪ್ರತಿರೋಧಿಸಬಹುದಲ್ಲವೇ? ಆ ಮೂಲಕ ಅವುಗಳ ಸಂತತಿ ಉಳಿದರೆ ನಿತ್ಯ ಯುಗಾದಿಯೇ ಅಲ್ಲವೇ? ಜೊತೆಗೆ ಬೇವಿನ ಮರದ ವಿಶೇಷ ಗೊತ್ತಿರುವುದೇ. ಅದೊಂದು ಗಟ್ಟಿ ಮರಮುಟ್ಟು ಜೊತೆಗೆ ಬೇಸಿಗೆಯಲ್ಲಿ ಅದರ ಹಣ್ಣು, ಬೀಜಗಳಿಂದ ಹಲವು ಉಪಯೋಗಗಳಿವೆ. ಔಷಧೀಯ ಗುಣಗಳಿರುವ ಬೇವಿನಮರಗಳನ್ನು ಉಳಿಸಿಕೊಳ್ಳುವ ಸಲುವಾಗಿ ಇದೊಂದು ಆಚರಣೆ ಬಂದಿರಲೂಬಹುದು. ಆದರೆ ನಾವು ವರ್ಷಪೂರ್ತಿ ಇಂತಹ ಅನೇಕ ಹೆಮ್ಮರಗಳನ್ನು ಕಡಿದು, ಹಬ್ಬ ಬಂದಾಗ ಮಾತ್ರ ಭಕ್ತಿ ತೋರಿಸುವುದು ಯಾವ ನ್ಯಾಯ? ಮುಂದಿನ ಯುಗಾದಿಗೆ ಇಂದೇ ಒಂದು ಬೇವಿನ ಸಸಿ ನೆಟ್ಟು ಬೆಳೆಸಿದರೆ ಅದರ ಸಂತತಿಯೂ ಉಳಿದಂತೆ, ನಮ್ಮ ಆಚರಣೆಯೂ ಈಡೇರಿದಂತೆ ಅಲ್ಲವೇ?

- ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.