ಕನ್ನಡ ಪ್ರೀತಿಗೆ ಬೇಕು ನೆರವಿನ ಹಸ್ತ
ಮೈಸೂರಿನ ಸೈಯದ್ ಇಸಾಕ್ ಅವರು ಸ್ವಂತ ವೆಚ್ಚದಲ್ಲಿ ಹಾಗೂ ಹಲವಾರು ದಾನಿಗಳಿಂದ ಸಂಗ್ರಹಿಸಿ,
ನಿರ್ವಹಿಸುತ್ತಿದ್ದ ಕನ್ನಡ ಪುಸ್ತಕಗಳ ಚಾವಡಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವುದು ಕನ್ನಡ ಭಾಷೆಗೆ ದ್ರೋಹ ಬಗೆದಂತೆ. ಚಾವಡಿ ತೆರವುಗೊಳಿಸಬೇಕೆಂಬ ಬೆದರಿಕೆಗೆ ಮಣಿಯದ ಇಸಾಕ್, ಶಕ್ತಿಶಾರದೆಯ ಆರಾಧನೆಗೆ ಕಿಂಚಿತ್ತೂ ಕುಂದು ಬರದಂತೆ ಚಾವಡಿ ನಡೆಸುತ್ತಿದ್ದ ಬಗೆ ಅನನ್ಯವಾದುದು.
ಪುಸ್ತಕ ಮತ್ತು ಪತ್ರಿಕೆ ಓದುವವರಿಗಿಂತ, ದೃಶ್ಯ ಮಾಧ್ಯಮಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗು
ತ್ತಿರುವ ಇಂಥ ಸಂದರ್ಭದಲ್ಲಿ ಇಸಾಕ್ ಅವರು ತಮ್ಮ ಭಾಷಿಕರೇ ಹೇರಳವಾಗಿರುವ ಉದಯಗಿರಿಯಲ್ಲಿ ಕನ್ನಡ ಓದುಗರಿಗಾಗಿ ಧರ್ಮನಿರಪೇಕ್ಷವಾಗಿ ಪುಸ್ತಕ ಚಾವಡಿ ಸ್ಥಾಪಿಸಿ, ಪ್ರತಿಫಲಾಪೇಕ್ಷೆಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದುದನ್ನು ಸರ್ಕಾರಕ್ಕಿಂತ ಕನ್ನಡ ಪುಸ್ತಕಪ್ರೇಮಿಗಳು ಗುರುತಿಸಿ ಸಲಾಂ ಹೇಳಿದ್ದಾರೆ. ದ್ವೇಷದ ದಳ್ಳುರಿಗೆ ಪುಸ್ತಕಗಳು ಬೆಂದುಹೋಗಿವೆ. ಈಗ ಇಸಾಕ್ ಅವರಿಗೆ ಸಾಂತ್ವನಕ್ಕಿಂತ ದಾನಿಗಳ ನೆರವಿನ ಮಹಾಪೂರ ಹರಿದು ಬಂದಿದೆ. ಪುಸ್ತಕ ಚಾವಡಿಗೆ ‘ಸೂರು’ ಒದಗಿಸುವ ಮೂಲಕ ಸಾಹಿತ್ಯ-ಸಂಸ್ಕೃತಿಯ ಅಸ್ಮಿತೆಯನ್ನು ಪೋಷಿಸುವುದು ಸರ್ಕಾರದ ಇಂದಿನ ತುರ್ತು ಕರ್ತವ್ಯ.
- ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.