ಉನ್ನತ ಶಿಕ್ಷಣದ ವಿದ್ಯಾರ್ಥಿಗಳಲ್ಲಿ ಹಲವರು ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆಯುವ ಮಹದಾಸೆ ಹೊಂದಿರುತ್ತಾರೆ.
ಹಿಂದೆಲ್ಲಾ ಸ್ನಾತಕೋತ್ತರ ಪದವೀಧರರನ್ನು ನೇರವಾಗಿ ಆಯ್ಕೆ ಮಾಡಿಕೊಂಡು ಸಂಶೋಧನೆಗೆ ಬೇಕಾದ ಮಾರ್ಗದರ್ಶನವನ್ನು ನೀಡಲಾಗುತ್ತಿತ್ತು. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿದ್ದ ಸಮಸ್ಯೆಯನ್ನು ಮನಗಂಡ ವಿಶ್ವವಿದ್ಯಾಲಯಗಳು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡುವ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದವು. ಆದರೆ ಇತ್ತೀಚೆಗೆ ಸಂಶೋಧನಾ ಮಾರ್ಗದರ್ಶನದ ವಿಚಾರವಾಗಿ ಲಂಚ ಕೇಳುವ, ಲೈಂಗಿಕ ಶೋಷಣೆಗೆ ಗುರಿಪಡಿಸುವ ಆರೋಪ ಕೇಳಿಬರುತ್ತಿರುವುದನ್ನು ನೋಡಿದರೆ, ಸಂಶೋಧನೆ ಮತ್ತು ಸಂಶೋಧನಾ ಮಾರ್ಗದರ್ಶನದ ಮೌಲ್ಯವು ದಾರಿ ತಪ್ಪಿದೆಯೇ ಎಂಬ ಅನುಮಾನ ಮೂಡುತ್ತದೆ.
ಸಂಶೋಧನಾ ಕ್ಷೇತ್ರದಲ್ಲಿ ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ದೋಷಿಗಳೆಂದು ಕಂಡುಬರುವವರಿಗೆ ಮಾರ್ಗದರ್ಶನಕ್ಕೆ ನೀಡಿರುವ ಅನುಮತಿಯನ್ನೇ ರದ್ದು ಮಾಡಬೇಕು. ವಿದ್ಯಾರ್ಥಿಗಳ ಏಳ್ಗೆಗಾಗಿಯೇ ತಮ್ಮ ಜ್ಞಾನವನ್ನು ಮುಡಿಪಾಗಿಟ್ಟಿರುವ ನಿಜವಾದ ಮಾರ್ಗದರ್ಶಕರಿಗೆ ಇಂತಹವರಿಂದ ಆಗುವ ಕಳಂಕವನ್ನು ತಪ್ಪಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
ಮಹದೇವಪ್ಪ ಪಿ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.