ವಿವಿಧ ರೋಗಗಳ ಶಮನದ ಭವಿಷ್ಯದ ಮಾರ್ಗವಾಗಿ ಸಂಯೋಜಿತ ಚಿಕಿತ್ಸಾ ವಿಧಾನವನ್ನು ಜಾರಿಗೆ ತರಬೇಕೆಂಬ ಕೇಶವ ಎಚ್. ಕೊರ್ಸೆ ಅವರ ಆಶಯವನ್ನು (ಪ್ರ.ವಾ., ಜ. 7) ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ. ಎಲ್ಲಾ ವೈದ್ಯಕೀಯ ಪದ್ಧತಿಗಳಿಗೆ ತಮ್ಮದೇ ಆದ ಮಿತಿಗಳಿವೆ. ಯಾವ ಪದ್ಧತಿಯೂ ಪರಿಪೂರ್ಣ ಅಲ್ಲ. ಆದ್ದರಿಂದಲೇ ವೈದ್ಯಕೀಯ ವಿಜ್ಞಾನದಲ್ಲಿ ಕಲಿಕೆಗೆ ಕೊನೆಯಿಲ್ಲ ಎಂದು ಹೇಳುವುದು.
ಎಲ್ಲ ಪದ್ಧತಿಯ ವೈದ್ಯರು ತಮ್ಮ ಸ್ವಯಂ ಪ್ರತಿಷ್ಠೆ, ಧನದಾಹವನ್ನು ಬದಿಗಿಟ್ಟು ಯೋಚಿಸಬೇಕು. ತಾವು ಕಲಿತ ಪದ್ಧತಿಯಲ್ಲೇ ಚಿಕಿತ್ಸೆ ನೀಡುವ ಶಪಥ ಮಾಡಿ, ಉಳಿದ ಪದ್ಧತಿಗಳ ಬಗ್ಗೆ ಸಮಾನ ಗೌರವ ಹೊಂದಿರಬೇಕು. ವೈದ್ಯಕೀಯದ ವ್ಯಾಪಾರೀಕರಣ ಮತ್ತು ವಿಜೃಂಭಿಸುತ್ತಿರುವ ಕಾರ್ಪೊರೇಟ್ ಸಂಸ್ಕೃತಿಯ ಹಾವಳಿ ಕಡಿಮೆಯಾದರೆ ಹೊಸತನದತ್ತ ಪ್ರಾಮಾಣಿಕವಾಗಿ ಯೋಚಿಸಬಹುದು. ಸಂಯೋಜಿತ ಪದ್ಧತಿ ಕಾರ್ಯರೂಪಕ್ಕೆ ಬರಲು ಮುಖ್ಯವಾಗಿ ಸರ್ಕಾರ ಆರೋಗ್ಯ ವಲಯಕ್ಕೆ ಹೆಚ್ಚು ಹಣವನ್ನು ಮೀಸಲಿಡಬೇಕು. ಏಕೆಂದರೆ ಇಂತಹ ವ್ಯವಸ್ಥೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಮಾತ್ರ ಅಳವಡಿಸಲು ಸಾಧ್ಯ ಮತ್ತು ಅದು ಎಲ್ಲರಿಗೂ ತಲುಪುವ ಖಾತರಿ ಇರುತ್ತದೆ.
–ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.