ADVERTISEMENT

ದ್ವೇಷ–ಮತ್ಸರ ಹೃದಯದಲ್ಲಿಲ್ಲ...

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

ಭಾರತ ಕ್ರಿಕೆಟ್ ತಂಡದ ಮೇರು ಆಟಗಾರ ಮಹೇಂದ್ರಸಿಂಗ್ ಧೋನಿ ಅವರು ಭಾನುವಾರ ನಡೆದ ಭಾರತ–ಪಾಕ್ ನಡುವಣ ಪಂದ್ಯ ವೀಕ್ಷಣೆಗಾಗಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರಿಗೆ ಟಿಕೆಟ್ ಕೊಡಿಸಿರುವುದು ಮತ್ತು ಭಾರತದ ವಿರಾಟ್‌ ಕೊಹ್ಲಿ, ಸಚಿನ್ ತೆಂಡೂಲ್ಕರ್‌ ಅವರನ್ನು ಪಾಕಿಸ್ತಾನದ ಆಟಗಾರ ಬಾಬರ್ ಆಜಂ ಅವರು ಮಾದರಿ ಆಗಿಸಿಕೊಂಡಿರುವುದು ವರದಿಯಾಗಿದೆ (ಪ್ರ.ವಾ., ಜೂನ್‌ 15). ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹಳಸಿಹೋಗುತ್ತಿರುವ ಇಂದಿನ ಸಂದರ್ಭದಲ್ಲಿ, ಈ ಬೆಳವಣಿಗೆಗಳು ಆಶಾದಾಯಕವಾಗಿ ಕಾಣಿಸುತ್ತವೆ. ದ್ವೇಷ–ಮತ್ಸರ ಹೃದಯದಲ್ಲಿಲ್ಲ, ಕಲುಷಿತ ಮನಸ್ಸುಗಳಲ್ಲಿ ಮಾತ್ರ ಇರಲು ಸಾಧ್ಯ ಎಂಬುದಕ್ಕೆ ಇವು ನಿದರ್ಶನಗಳು.

ಉಭಯ ದೇಶಗಳ ನಡುವಿನ ವೈಮನಸ್ಸು ಯಾವ ಪುರುಷಾರ್ಥಕ್ಕೆ? ‘ಬಿತ್ತಿದಂತೆ ಬೆಳೆ’ ಎಂಬಂತೆ, ನಮ್ಮ ನಂತರದ ಪೀಳಿಗೆಗಳಿಗೆ ನಾವೇನು ಸಂದೇಶ ಕೊಡುತ್ತಿದ್ದೇವೆ ಅಥವಾ ಯಾವ ಬಗೆಯ ಸಂಬಂಧವನ್ನು ಉಳಿಸಿ ಹೋಗುತ್ತಿದ್ದೇವೆ? ಮನುಷ್ಯ– ಮನುಷ್ಯರ ನಡುವಣ ಬಾಂಧವ್ಯವು ದ್ವೇಷ, ಹಗೆತನಗಳನ್ನು ಮೀರಿ ಬೆಳೆಯಬೇಕು. ಧೋನಿ ಹಾಗೂ ಬಾಬರ್ ಅವರ ಮುಕ್ತ ಮನಸ್ಸು ಎಲ್ಲರಿಗೂ ಮಾದರಿಯಾಗಬೇಕು. ಇಂತಹ ಸಮಷ್ಟಿ ಪ್ರಜ್ಞೆ ಎರಡೂ ದೇಶಗಳ ಜನರಲ್ಲಿ ಮೂಡಿದರೆ ಮತ್ತು ಸಂಬಂಧಗಳನ್ನು ಹದಗೆಡಿಸುತ್ತಿರುವ ಕೆಲವೇ ಕೆಲವು ಮೂಲಭೂತವಾದಿಗಳ ಕಣ್ಣು ತೆರೆಸಿದರೆ, ನಮ್ಮ ನಡುವೆ ಇರುವ ತ್ವೇಷಮಯ ವಾತಾವರಣ ತಿಳಿಯಾಗಬಹುದು.

–ಡಾ. ಜಿ.ಡಿ.ರಾಘವನ್,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.