ಯಾದಗಿರಿ: ನಗರಸಭೆ ಅಧ್ಯಕ್ಷರಿಂದ ಪತ್ರಕರ್ತರಿಗೆ ದಿಢೀರ್ ಬುಲಾವ್ ಬಂತು. ಅಧ್ಯಕ್ಷರ ಮತ್ತು ಪೌರಾಯುಕ್ತರ ಮಧ್ಯೆ ನಡೆಯುತ್ತಿರುವ ಶೀತಲ ಸಮರ ಸ್ಫೋಟಗೊಂಡಿರಬಹುದೇ ಎಂಬ ಅನುಮಾನದಿಂದ ಪತ್ರಕರ್ತರು ಚಿತ್ತಾಪುರ ಸಂಪರ್ಕ ರಸ್ತೆಯಲ್ಲಿ ಕೆಂಧೂಳಿನ ಮಜ್ಜನ ಮಾಡುತ್ತ ನಗರಸಭೆಯ ಕಚೇರಿ ತಲುಪಿದರು.
‘ನೋಡಿದ್ರಾ... ಪೌರಾಯುಕ್ತರ ವಿರುದ್ಧ ನಗರಸಭೆಯ 22 ಮಂದಿ ಸದಸ್ಯರು ವಿಶೇಷ ಸಭೆ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟು ಎರಡು ತಿಂಗಳು ಕಳೆದ್ರೂ ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದು ನಗರಸಭೆಯ ಅಧ್ಯಕ್ಷರು ಅಳಲು ತೋಡಿಕೊಳ್ಳತೊಡಗಿದರು.
‘ಡಿ.ಸಿ. ಸಾಹೇಬ್ರು ಸಹ ಕಮಿಷನರ್ ವಿರುದ್ಧ ದೊಡ್ಡ ಕಂಪ್ಲೇಟ್ ಬರೆದ್ರೂ ಏನೂ ಆಗಿಲ್ಲ. ಈ ಕಮಿಷನರ್ ಇರೋವರೆಗೂ ಸಾಸಿವೆ ಕಾಳಷ್ಟೂ ಅಭಿವೃದ್ಧಿ ಆಗಂಗಿಲ್ಲ’ ಎಂದು ಅಧ್ಯಕ್ಷರ ಪಕ್ಕದಲ್ಲಿ ಕುಳಿತಿದ್ದ ಸದಸ್ಯರು ಗೋಳು ತೋಡಿಕೊಂಡರು.
ಸದಸ್ಯರ ಅಳಲು, ಗೋಳು ಆಲಿಸಿದ ಪತ್ರಕರ್ತರು,‘ಸರ್ಕಾರಕ್ಕೆ ಏನೋ ತಾಂತ್ರಿಕ ಸಮಸ್ಯೆ ಎದುರಾಗಿರಬೇಕು’ ಎಂದು ಸಮಾಧಾನ ಹೇಳಲು ಮುಂದಾದರೆ, ‘ಅಂಗೇನೂ ಇಲ್ರಿ... ಪೌರಾಯುಕ್ತ ತುಂಬಾ ಗಟ್ಟಿ ಕುಳ ಅದಾರ್ರಿ...’ ಎಂದು ಸದಸ್ಯರೊಬ್ಬರು ಹೇಳುತ್ತಿದ್ದಂತೆ ಪತ್ರಕರ್ತರು ಮಾತ್ರವಲ್ಲ ಜಮದಗ್ನಿಯಂತಿದ್ದ ಅಧ್ಯಕ್ಷರೂ ಗೊಳ್ ಎಂದು ನಗತೊಡಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.