ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ರೇಷ್ಮೆ ಕೂಡ ಒಂದು. ರೇಷ್ಮೆ ಬೆಳೆಗಾರರ ಹಾಗೂ ರೇಷ್ಮೆ ನೂಲು ತಯಾರಿಕರ ಅಭಿವೃದ್ದಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ರೇಷ್ಮೆ ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ’ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮ ಪ್ರೋತ್ಸಾಹ’ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಿಂದ ರೇಷ್ಮೆ ನೂಲು ತಯಾರಿಕರಿಗೆ ಸಿಗುವ ಸೌಲಭ್ಯಗಳೇನು? ಯೋಜನೆಯನ್ನು ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಅಲ್ಪಸಂಖ್ಯಾತ ಕುಟುಂಬಗಳಿಗೆ ಇಲಾಖೆಯಿಂದ ಪ್ರೋತ್ಸಾಹ ಧನ ದೊರೆಯಲಿದೆ. ಇಲಾಖೆಯು ₹2 ಲಕ್ಷದ ವರೆಗೂ ಸಾಲ ನೀಡುತ್ತದೆ. ಇದರಲ್ಲಿ ಶೇ 50ರಷ್ಟು ಸಹಾಯಧನವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ. ರೇಷ್ಮೆ ಉದ್ಯಮವನ್ನು ಅಭಿವೃದ್ದಿಪಡಿಸುವುದು, ಮೂಲಸೌಕರ್ಯಗಳನ್ನು ಒದಗಿಸುವುದು ಹಾಗೂ ಅರ್ಥಿಕವಾಗಿ ಸದೃಢವಾಗಿಸುವುದು ಯೋಜನೆಯ ಉದ್ದೇಶ.
₹ 1ಲಕ್ಷ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಆರಂಭ:
ಈ ಯೋಜನೆಯ ಮೂಲಕ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ರೈತರಿಗೆ ₹2 ಲಕ್ಷದವರೆಗೂ ಸಾಲ ದೊರೆಯಲಿದೆ. ಈ ಪೈಕಿ ₹ 1ಲಕ್ಷ ಸಹಾಯಧನವಾಗಿರುತ್ತದೆ. ಈ ಯೋಜನೆ ಪಡೆಯಲು ಇದೇ ಅಕ್ಟೋಬರ್ 16ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು?
ರಾಜ್ಯದ ಮತೀಯ ಅಲ್ಪಸಂಖ್ಯಾತರಾಗಿರಬೇಕು.
ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ವಯೋಮಿತಿ ಕನಿಷ್ಠ 18 ರಿಂದ 55 ವರ್ಷದ ಒಳಗೆ ಇರಬೇಕು.
ಅರ್ಜಿದಾರರ ವಾರ್ಷಿಕ ಆದಾಯವು ₹6 ಲಕ್ಷ ಮೀರಿರಬಾರದು.
ಅರ್ಜಿದಾರರ ಕುಟುಂಬದಲ್ಲಿ ಸರ್ಕಾರಿ ನೌಕರರು ಇರಬಾರದು.
ಕಳೆದ 5 ವರ್ಷಗಳಲ್ಲಿ ನಿಗಮದಿಂದ ಯಾವುದೇ ಸಾಲಗಳು ಅಥವಾ ಸಹಾಯಧನ ಸೌಲಭ್ಯ ಪಡೆದಿರಬಾರದು.
ಅಗತ್ಯ ದಾಖಲೆಗಳು ಯಾವುವು?
ಸ್ವಯಂ ಘೋಷಣೆ ಪತ್ರ
ನೂಲು ಬಿಚ್ಚಾಣಿಕೆದಾರರ ಪರವಾನಗಿ
ಆದಾಯ ಪ್ರಮಾಣ ಪತ್ರ.
ಆಧಾರ್ ಕಾರ್ಡ್ ಪ್ರತಿ.
ಅರ್ಜಿದಾರರನ ಇತ್ತೀಚಿನ ಭಾವ ಚಿತ್ರ.
ಅಲ್ಪಸಂಖ್ಯಾತ ಪ್ರಮಾಣ ಪತ್ರ.
ಫಲಾನುಭವಿಯ ಬ್ಯಾಂಕ್ ಖಾತೆಯ ಪ್ರತಿ.
ಯೋಜನಾ ವರದಿ
ಸಹಾಯಧ ಪಡೆಯುವುದು ಹೇಗೆ?
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಾಲತಾಣ ’https://kmdconline.karnataka.gov.in/Portal/login’ ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಪಡೆಯಿರಿ.
ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಭರ್ತಿ ಮಾಡಿ ಮುಂದೆ ಕ್ಲಿಕ್ ಮಾಡಿ.
ಆಧಾರ್ ದೃಢೀಕರಿಸಿದ ಬಳಿಕ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
ರೇಷ್ಮೆ ನೂಲು ಬಿಚ್ಚಾಣಿಕೆ ಯೋಜನೆ ಆಯ್ಕೆ ಮಾಡಿ.
ನಂತರ ತಂದೆಯ ಹೆಸರು, ಲಿಂಗ, ವಿದ್ಯಾರ್ಹತೆ ಹಾಗೂ ಅಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.
ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಆದಾಯ ಪ್ರಮಾಣಪತ್ರದೊಂದಿಗೆ ಇತರೆ ದಾಖಲೆಗಳನ್ನು ಸಲ್ಲಿಸಿ.
ಕೊನೆಯಲ್ಲಿ ನಿಮಗೆ ಅರ್ಜಿಯ ಐಡಿ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.