ಅಂಥ ಮಳೆ ಯಾವತ್ತೂ ನೋಡಿರಲಿಲ್ಲ. ಕಾರಿನ ಟಾಪ್ ಮೇಲೆ ಆಲಿಕಲ್ಲು ಬಿದ್ದಂತೆ! ರಸ್ತೆ ಏನೂ ಕಾಣುತ್ತಿಲ್ಲ... ಅಕ್ಕಪಕ್ಕ ಮಿಣುಕು ದೀಪಗಳು ಕಂಡರೆ ಅಲ್ಲಿನ್ನೊಂದು ಕಾರು ತೆವಳುತ್ತಿದೆ ಎಂಬಂತೆ ಕಾಣುತ್ತಿತ್ತು.
ನೆಹರು ಔಟರ್ ರಿಂಗ್ ರೋಡ್ ಅದು. ಹೈದರಾಬಾದ್ ನಗರದಿಂದ ಬೆಂಗಳೂರಿಗೆ ಬರುವಾಗ ಬಿರುಗಾಳಿ, ದೂಳು... ದೂಳಿನಿಂದಲೇ ಅರ್ಧ ಕಂಗೆಟ್ಟಿದ್ದೆವು. ಜೋರು ಮಳೆ. ಕಾರು ಅಡ್ಡಡ್ಡ ಹೋಗುತ್ತಿತ್ತು. ಏನೆಲ್ಲ ನೆನಪುಗಳು.. ಮನೆಯಲ್ಲಿ ಮಕ್ಕಳಿವೆ. ಅಪ್ಪ–ಅಮ್ಮ
ನನ್ನನ್ನೇ ನೆಚ್ಚಿಕೊಂಡಿದ್ದಾರೆ. ಆಗಾಗ ಅಮ್ಮ ಹೇಳುವ ಮಾತು, ನಮ್ಮಿಡೀ ಕುಟುಂಬದ ಕೇಂದ್ರಬಿಂದು ನೀನು, ಏನಾದರೂ ಆದರೆ ಇಡೀ ಕುಟುಂಬವೇ ಚದರುತ್ತದೆ... ಅದ್ಯಾಕೋ ಕಣ್ಣೀರು.. ಬರೀ ನೀರು.. ಒಳಗೂ ಹೊರಗೂ...
ಪಟ್ಟಣಚೆರುವಿನಿಂದ ವರ್ತುಲ ರಸ್ತೆ ಹತ್ತಿದವರು, ಬೆಂಗಳೂರು ಹೆದ್ದಾರಿಯಲ್ಲಿ ಇಳಿಯುವವರೆಗೂ ಜೀವ ಅಂಗೈಯಲ್ಲಿತ್ತು.
ಕಾರಿನ ಗಾಜಿಗೆ ಬೀಳುವ ನೀರಿಗೆ ವೈಪರ್ಗಳಿದ್ದವು. ಕಣ್ಣೊಳಗಿದ್ದ ಪಸೆ ಕರಗಿದ್ದು, ಜಡಚರ್ಲಾ ಬಳಿ ಎಳೆಬಿಸಿಲು ಕಂಡಾಗಲೇ! ಎಲ್ಲ ಮಳೆಗಳಲ್ಲಿ ಜೀವನಪ್ರೀತಿಯನ್ನೇ ನೆನೆದಿದ್ದೆ. ಆದರೆ, ಈ ಮಳೆಯಲ್ಲಿ ನೆನೆಯದಿದ್ದರೂ ಎಲ್ಲರನ್ನೂ ನೆನೆಸಿ ಕೊಂಡಿದ್ದೆ. ಈ ಮಳೆಯನ್ನು ಮರೆಯುವುದೆಂತು?
–ಅರ್ಪಣಾ, ಬೆಂಗಳೂರು
*
ಮಳೆ ಕುರಿತ ನಿಮ್ಮ ನೆನಪುಗಳನ್ನು ಈ ವಿಳಾಸಕ್ಕೆ ಕಳಿಸಿ: gulmoharpv@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.