ADVERTISEMENT

‘ನಾನೆಷ್ಟು ನ್ಯಾಯ ಕೊಟ್ಟೆ ಅನ್ನೋದಷ್ಟೇ ಮುಖ್ಯ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 19:30 IST
Last Updated 1 ಆಗಸ್ಟ್ 2016, 19:30 IST
‘ನಾನೆಷ್ಟು ನ್ಯಾಯ ಕೊಟ್ಟೆ  ಅನ್ನೋದಷ್ಟೇ ಮುಖ್ಯ’
‘ನಾನೆಷ್ಟು ನ್ಯಾಯ ಕೊಟ್ಟೆ ಅನ್ನೋದಷ್ಟೇ ಮುಖ್ಯ’   

‘ನಮ್ಮಿಂದ ನಿರ್ದೇಶಕರು, ನಿರ್ಮಾಪಕರು ಎಷ್ಟು ದುಡ್ಡು ಮಾಡಿಕೊಂಡರು ಎನ್ನುವುದು ಮುಖ್ಯವಲ್ಲ. ಬದಲಿಗೆ ನಾವು ಆ ಚಿತ್ರಕ್ಕೆ ಎಷ್ಟರಮಟ್ಟಿಗೆ ನ್ಯಾಯ ಒದಗಿಸಿದ್ದೇವೆ ಎನ್ನುವುದು ಮುಖ್ಯ’ ಎಂದಿದ್ದಾರೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ.

ಮೊನ್ನೆ ಸಮಾರಂಭವೊಂದಕ್ಕೆ ಹೋಗಿದ್ದ ಅವರಿಗೆ ಯಾರೋ, ‘ನಟಿಸುವುದು ನೀವು, ಆದರೆ ನಿಮಗಿಂತ ನಿರ್ಮಾಪಕರು, ನಿರ್ದೇಶಕರು ಹೆಚ್ಚು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬೇಸರ ಎನಿಸುವುದಿಲ್ಲವೇ’ ಎಂದು ಕೇಳಿದ್ದಕ್ಕೆ ಅನುಷ್ಕಾ ಈ ರೀತಿ ತಿರುಗೇಟು ನೀಡಿದ್ದಾರೆ. 

‘ಮುಂದಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮುನ್ನ,  ಹಿಂದೆ ಬಿಡುಗಡೆಯಾದ ಚಿತ್ರವನ್ನು ಮೂರನೆಯ ವ್ಯಕ್ತಿಯಾಗಿ ನಾನೇ ನೋಡಿದಾಗ, ಆ ಚಿತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ಭಾವನೆ ನನಗೆ ಬಂದರೆ, ಅದೇ ನನಗೆ ಸಿಗುವ ನಿಜವಾದ ಸಂಭಾವನೆ’ ಎಂದಿರುವ ಅನು, ಇಲ್ಲಿಯವರೆಗೆ ತಾವು ನಟಿಸಿರುವ ಎಲ್ಲಾ ಪಾತ್ರಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ.

ವಿಭಿನ್ನ ನಿರ್ದೇಶಕರ ಜೊತೆ ಕೆಲಸ ಮಾಡುವ ಆಸೆ ಅನುಷ್ಕಾಗೆ ಮೊದಲಿನಿಂದಲೂ ಇತ್ತಂತೆ. ಅದಕ್ಕಾಗಿ ತಾವು ಯಾವ ಯಾವ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಬಗ್ಗೆ ಪಟ್ಟಿ ಮಾಡಿದ್ದರಂತೆ. ಆ ಪಟ್ಟಿಯಲ್ಲಿರುವ ಕೆಲವೇ ಕೆಲವು ನಿರ್ದೇಶಕರು ಬಾಕಿ ಉಳಿದಿರುವುದಾಗಿ ಹೇಳಿದ ಅವರು, ಅವರ ಹೆಸರನ್ನು ಮಾತ್ರ ಹೇಳಲು ಬಯಸಲಿಲ್ಲ. ‘ನನ್ನ ನಟನಾ ಸಾಮರ್ಥ್ಯ ಗುರುತಿಸಿ ಆ ನಿರ್ದೇಶಕರೇ ನನ್ನನ್ನು ಅವರ ಚಿತ್ರಕ್ಕೆ ಕರೆಸಿಕೊಳ್ಳಬೇಕು. ನಾನಾಗಿಯೇ ಏನನ್ನೂ ಹೇಳುವುದಿಲ್ಲ’ ಎಂದಿದ್ದಾರೆ 28ರ ಈ ಚೆಲುವೆ. ಹಾಗೇ, ಎಲ್ಲಾ ನಿರ್ದೇಶಕರಿಂದಲೂ ಭೇಷ್‌ ಎನಿಸಿಕೊಳ್ಳುವ ಆಸೆಯಂತೆ ಅವರಿಗೆ.

ಪಿ.ಕೆ ಮತ್ತು ಸುಲ್ತಾನ್‌ ಚಿತ್ರದ ಭರ್ಜರಿ ಯಶಸ್ಸಿನ ಬಗ್ಗೆ ಅವರಿಗೆ ಪ್ರಶ್ನೆ ಕೇಳಿದಾಗ, ‘ಈ ಚಿತ್ರಗಳಂತೆ ಕೆಲವು ಚಿತ್ರಗಳಲ್ಲಿ ನಾನು ಭಾರಿ ಯಶಸ್ಸು ಕಂಡದ್ದು ನಿಜ. ಆದರೆ ನನಗೆ ಎಲ್ಲ ಚಿತ್ರಗಳೂ ಒಂದಲ್ಲೊಂದು ಪಾಠ ಕಲಿಸಿವೆ. ಬಹುಮುಖ ಪ್ರತಿಭಾವಂತೆ ಎನಿಸಿಕೊಳ್ಳುವ ಆಸೆ ನನ್ನದು’ ಎಂದಿದ್ದಾರೆ.

2008ರಿಂದ ಚಿತ್ರರಂಗಕ್ಕೆ ಬಂದ ಅನುಷ್ಕಾ, ಆದಿತ್ಯ ಚೋಪ್ರಾ, ಯಶ್‌ ಚೋಪ್ರಾ, ರಾಜ್‌ಕುಮಾರ್‌ ಹಿರಾನಿ, ಕರಣ್‌ ಜೋಹರ್‌ ಸೇರಿದಂತೆ ಪ್ರಸಿದ್ಧ ನಿರ್ಮಾಪಕ, ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಸದ್ಯ ಇಮ್ತಿಯಾಜ್‌ ಅಲಿ ಅವರು ಎನ್‌ಎಚ್‌–10 ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.