ADVERTISEMENT

ಹಿನ್ನೋಟ: ಅಕ್ಟೋಬರ್ 17ರಂದು ಭಾರತದಲ್ಲಿ ಈ ಪ್ರಮುಖ ಘಟನೆಗಳು ನಡೆದಿದ್ದವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2025, 7:50 IST
Last Updated 17 ಅಕ್ಟೋಬರ್ 2025, 7:50 IST
   

ಜಗತ್ತಿನಲ್ಲಿ ಪ್ರತಿದಿನವು ಒಂದೊಂದು ವಿಶೇಷ ಘಟನೆಗಳು ಸಂಭವಿಸುತ್ತವೆ. ಭಾರತ ಕೂಡ ಪ್ರತಿದಿನ ಒಂದೊಂದು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಅಕ್ಟೋಬರ್ 17 ಭಾರತದ ಐತಿಹಾಸಿಕ ದೃಷ್ಟಿಕೋನದಿಂದ ನೋಡಿದಾಗ ಪ್ರಮುಖ ದಿನ ಎನಿಸಿಕೊಂಡಿದೆ. ಹಾಗಿದ್ದರೆ, ಯಾವ ಕಾರಣಕ್ಕೆ ಈ ದಿನ ವಿಶೇಷ ಎನಿಸಿಕೊಂಡಿದೆ ಎಂಬುದನ್ನು ನೋಡೋಣ.

ಮದರ್‌ ತೆರೆಸಾಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆತ ದಿನ:

1979ರ ಅಕ್ಟೋಬರ್‌ 17ರಂದು ಮದರ್‌ ತೆರೆಸಾಗೆ ನೊಬೆಲ್‌ ಶಾಂತಿ  ಪ್ರಶಸ್ತಿ ದೊರೆತ ದಿನವಾಗಿದೆ. ಮದರ್‌ ತೆರೆಸಾ ಮೂಲತಃ ಉತ್ತರ ಮ್ಯಾಸಿಡೋನಿಯಾ ದೇಶದವರು. ಅವರು 1910ರಲ್ಲಿ ಭಾರತಕ್ಕೆ ಆಗಮಿಸಿದರು. ಕೋಲ್ಕತ್ತಾದಲ್ಲಿ  ‘ಮಿಷನರೀಸ್ ಆಫ್ ಚಾರಿಟಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಕುಷ್ಠ ರೋಗಿಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲಘಟ್ಟದಲ್ಲಿ, ಸ್ವತಃ ತಾವೇ ಮುಂದೆ ನಿಂತು ಕುಷ್ಠ ರೋಗಿಗಳನ್ನು ಸೋದರಿಯಂತೆ ಆರೈಕೆ ಮಾಡಿದವರು. ಇವರ ನಿಸ್ವಾರ್ಥ ಸೇವೆಗೆ ವಿಶ್ವ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತು. 1980ರಲ್ಲಿ ಭಾರತ ರತ್ನ ಪ್ರಶಸ್ತಿಗೆ ಮದರ್‌ ತೆರೆಸಾ ಭಾಜನರಾದರು. 

ADVERTISEMENT

 ಕಪಿಲ್‌ ದೇವ್‌ ಅವರ ಕೊನೆಯ ಏಕದಿನ ಪಂದ್ಯ:

ಭಾರತ ಕಂಡ ಸರ್ವಕಾಲಿಕ ಶ್ರೇಷ್ಠ ಅಲ್‌ರೌಂಡರ್‌ ಎಂದೇ ಖ್ಯಾತಿ ಪಡೆದಿರುವ ಕಪಿಲ್‌ ದೇವ್‌ 1994ರ ಅಕ್ಟೋಬರ್‌ 17ರಂದು ವೆಸ್ಟ್ ಇಂಡೀಸ್ ವಿರುದ್ದ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 273/5 ರನ್‌ ಗಳಿಸಿತ್ತು, ಇದಕ್ಕೆ ವಿರುದ್ಧವಾಗಿ ಭಾರತ 177 ರನ್‌ಗಳಿಗೆ ಆಲ್‌ಔಟ್‌ ಆಗುವ 96 ರನ್‌ಗಳ ಸೋಲು ಅನುಭವಿಸಿತ್ತು.


ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌: 

2008ರ ಅಕ್ಟೋಬರ್ 17 ರಂದು ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾದ ದಿನವಾಗಿದೆ. ಅವರು ಈ ದಿನ ಬ್ರಿಯಾನ್ ಲಾರಾ ಅವರ 11,953 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದರು.

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ತಮ್ಮ ಟೆಸ್ಟ್‌ ಕ್ರಿಕೆಟ್ ವೃತ್ತಿ ಜೀವನದಲ್ಲಿ 12,000 ರನ್‌ ಪೂರೈಸುವ ಮೂಲಕ ಬ್ರಿಯಾನ್ ಲಾರಾ ಅವರ ದಾಖಲೆ ಮುರಿದಿದ್ದರು. ಜೊತೆಗೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ 12,000 ರನ್‌ ಗಡಿ ದಾಟಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಸಚಿನ್‌ ಪಾತ್ರರಾದ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.