ADVERTISEMENT

ಆಟದ ಮೇಲೆ ಇರಲಿ ಸಂಪೂರ್ಣ ಗಮನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಅಡಿಲೇಡ್ (ಪಿಟಿಐ/ಐಎಎನ್‌ಎಸ್): ಗೆಲುವು ಸಾಧ್ಯವೆನ್ನುವ ಹಂತದಲ್ಲಿ ಪಂದ್ಯ ಕೈತಪ್ಪಿ ಹೋಗಿದ್ದಕ್ಕೆ ಶ್ರೀಲಂಕಾ ತಂಡದ ನಾಯಕ ಮಾಹೇಲ ಜಯವರ್ಧನೆ ಸಿಡಿಮಿಡಿಗೊಂಡಿದ್ದಾರೆ.

ಕೊನೆಯ ಎಸೆತದಲ್ಲಿ ಚೆಂಡನ್ನು ತಡೆದು ನಿಲ್ಲಿಸುವಲ್ಲಿನ ಮಾಡಿದ ತಪ್ಪು ಹಾಗೂ ಎದುರಾಳಿ ಭಾರತದವರು ಮೂರು ರನ್ ಗಿಟ್ಟಿಸಲು ಅವಕಾಶ ಮಾಡಿಕೊಟ್ಟಿದ್ದು ಅವರ ಅಸಮಾಧಾನಕ್ಕೆ ಕಾರಣ. ಆದ್ದರಿಂದಲೇ ಅವರು `ಆಟದ ಮೇಲೆ ಇರಲಿ ಸಂಪೂರ್ಣ ಗಮನ~ ಎಂದು ತಮ್ಮ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

`ಪಂದ್ಯ ಮುಗಿಸಲಿಲ್ಲ. ಜಯ ಪಡೆಯಲಿಲ್ಲ. ಅದೇ ದೊಡ್ಡ ಕೊರತೆ. ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಈ ಸರಣಿಯಲ್ಲಿ ಎದುರಿಗೆ ಇರುವ ಎರಡು ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಎದುರು ಯಶಸ್ಸಿನ ಗುರಿ ಮುಟ್ಟುವಂಥ ಆಟವನ್ನು ಆಡಲು ಸಾಧ್ಯವಾಗಿಲ್ಲ. ಈ ಪಂದ್ಯದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ~ ಎಂದು ಅವರು `ಕೊನೆಯಲ್ಲಿ ಮಾಡಿದ ಒಂದು ಸಣ್ಣ ತಪ್ಪಿಗೆ ದೊಡ್ಡ ದಂಡ ತೆರಬೇಕಾಯಿತು~ ಎಂದು ಕೋಪದಿಂದ ನುಡಿದರು.

ಭಾರತ ವಿರುದ್ಧ ಮಂಗಳವಾರ ಇಲ್ಲಿ ನಡೆದ ತ್ರಿಕೋನ ಸರಣಿಯ ಏಕದಿನ ಪಂದ್ಯವು `ಟೈ~ ಆದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಆ್ಯಂಜೆಲೊ ಮ್ಯಾಥ್ಯೂಸ್ ದಾಳಿ ನಡೆಸಿದ 49ನೇ ಓವರ್ ಪಂದ್ಯದ ಮಹತ್ವದ ಘಟ್ಟ~ ಎಂದು ಹೇಳಿದರು. ಆ ಓವರ್‌ನಲ್ಲಿ ಮ್ಯಾಥ್ಯೂಸ್ ದುಬಾರಿ ಆಗಿದ್ದರಿಂದ ಪಂದ್ಯದಲ್ಲಿ ಭಾರತದವರು ಚೇತರಿಸಿಕೊಳ್ಳಲು ಸಾಧ್ಯವಾಯಿತು ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.