ಮುಂಬೈ (ಪಿಟಿಐ): ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು (ಎನ್ಸಿಎ) ಮುಚ್ಚುವುದಿಲ್ಲ ಎಂದು ಬಿಸಿಸಿಐನ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ಎನ್ಸಿಎಯ ಒಟ್ಟು ಆಯವ್ಯಯ ಪ್ರತಿ ವರ್ಷ ಏರಿಕೆಯಾಗುತ್ತದೆ. ಈ ವರ್ಷ ಬಿಸಿಸಿಐ 16 ಕೋಟಿ ರೂಪಾಯಿ ಖರ್ಚು ಮಾಡಿದ್ದು ಹೊರೆಯಾಗಿ ಪರಿಣಮಿಸಿದೆ. ಅಲ್ಲದೇ, ಎನ್ಸಿಎ ವರ್ಷದ ನಾಲ್ಕು ತಿಂಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಈ ಕಾರಣದಿಂದ ಮೇ ತಿಂಗಳ ಕೊನೆಯಲ್ಲಿ ಎನ್ಸಿಎ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿ, ಆಟಗಾರರ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲು ಬಿಸಿಸಿಐ ನಿರ್ಧರಿಸಿದೆ. ಏಪ್ರಿಲ್ 12ರಂದು ಚೆನ್ನೈನಲ್ಲಿ ನಡೆದ ಎನ್ಸಿಎ ಸಮಿತಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮುಂದಿಡಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು.
ಆದರೆ, ಈ ಸುದ್ದಿಯನ್ನು ಬಿಸಿಸಿಐನ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. `ಎನ್ಸಿಯನ್ನು ಮುಚ್ಚುವ ಕುರಿತಾದ ವರದಿ ಶುದ್ಧ ಸುಳ್ಳು. ಬೆಂಗಳೂರಿನಲ್ಲಿರುವ ಎನ್ಸಿಎ, ಚೆನ್ನೈ, ಮುಂಬೈ ಮತ್ತು ಮೊಹಾಲಿಯಲ್ಲಿರುವ ಪ್ರಾದೇಶಿಕ ಕಚೇರಿಗಳ ಕಾರ್ಯಗಳನ್ನು ಬಿಸಿಸಿಐ ಪ್ರತಿವರ್ಷವೂ ನಿಗದಿಪಡಿಸುತ್ತದೆ. ಆದರೆ, ಮುಚ್ಚುವ ಬಗ್ಗೆ ಚರ್ಚೆ ನಡೆದಿಲ್ಲ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.