ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದ್ದ ಭಾರತ ತಂಡ ಕಡೆಗೂ ಶ್ರೀಲಂಕಾವನ್ನು 81 ರನ್ಗಳ ಅಂತರದಿಂದ ಸೆದೆಬಡಿದು ತ್ರಿಕೋನ ಏಕದಿನ ಸರಣಿಯ ಫೈನಲ್ ಪ್ರವೇಶಿಸಿತು.
6 ಓವರ್ಗಳಲ್ಲಿ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದ ಭುವನೇಶ್ವರಕುಮಾರ್ ಅವರ ಪರಿಣಾಮಕಾರಿ ಬೌಲಿಂಗ್ ಭಾರತದ ಭರ್ಜರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.
ಮೊದಲಿಗೆ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಮಳೆರಾಯನ ಕಾಟ ಎದುರಾಯಿತು. ಪರಿಣಾಮ ಭಾರತಕ್ಕೆ ದಕ್ಕಿದ್ದು ಬರೇ 29 ಓವರ್ ಮಾತ್ರ. 3 ವಿಕೆಟ್ ಕಳೆದುಕೊಂಡು 119 ರನ್ನಷ್ಟೆ ಭಾರತ ಗಳಿಸಲು ಶಕ್ತವಾಯಿತು. ಭಾರತದ ಪರ ರೋಹಿತ್ ಶರ್ಮಾ 48ರನ್ ಗಳಿಸಿ ಅಜೇಯರಾಗುಳಿದರೆ, ವಿರಾಟ್ ಕೊಹ್ಲಿ 31 ರನ್ ಗಳಿಸಿದರು.
ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡಕ್ಕೆ ಡಿ/ಎಲ್ ನಿಯಮದ ಪ್ರಕಾರ 26 ಓವರ್ಗಳಲ್ಲಿ 178 ರನ್ ಗುರಿ ನೀಡಲಾಯಿತು.
ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡಕ್ಕೆ ಕಾಡಿದ್ದು ಭಾರತದ ಭುವನೇಶ್ವರ ಕುಮಾರ್. ಅವರ ಕರಾರುವಕ್ಕಾದ ಬೌಲಿಂಗ್ಗೆ ತರಗುಟ್ಟಿದ ಲಂಕಾ ಬ್ಯಾಟ್ಸ್ಮನ್ಗಳು ರನ್ ಗಳಿಸಲು ತಿಣುಕಾಡತೊಡಗಿದರು.
ಪರಿಣಾಮ ಭಾರತ ತಂಡವು 24.4 ಓವರ್ಗಳಲ್ಲಿ ಬರೇ 96 ರನ್ನಿಗೆ ಲಂಕಾ ತಂಡದ ಎಲ್ಲಾ ಬ್ಯಾಟ್ಸಮನ್ಗಳನ್ನು ಪೆವಿಲಿಯನ್ಗೆ ಅಟ್ಟಿ ವಿಜಯದ ನಗೆ ಬೀರಿತು.
ಭಾರತದ ಪರ ಭುವನೇಶ್ವರ ಕುಮಾರ್ 4, ಇಶಾಂತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ತಲಾ 2 ಉಮೇಶ್ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಅವರು ತಲಾ ಒಂದೊಂದು ವಿಕೆಟ್ ಪಡೆದರು.
ಈ ಜಯದೊಂದಿಗೆ ಒಟ್ಟಾರೆ 10 ಪಾಯಿಂಟ್ಗಳನ್ನು ಕಲೆ ಹಾಕಿದ ಭಾರತ ತಂಡ ಫೈನಲ್ಗೆ ಅರ್ಹತೆ ಗಿಟ್ಟಿಸಿತಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.