ADVERTISEMENT

ಕ್ರಿಕೆಟ್: ಭಾರತಕ್ಕೆ ಗಾಯದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2011, 19:30 IST
Last Updated 30 ಆಗಸ್ಟ್ 2011, 19:30 IST
ಕ್ರಿಕೆಟ್: ಭಾರತಕ್ಕೆ ಗಾಯದ ಸಮಸ್ಯೆ
ಕ್ರಿಕೆಟ್: ಭಾರತಕ್ಕೆ ಗಾಯದ ಸಮಸ್ಯೆ   

ಮ್ಯಾಂಚೆಸ್ಟರ್:  ಸೋಲುಗಳ ನಿರಾಸೆಯಿಂದ ಹೊರ ಬಂದಿರುವ ಭಾರತ ತಂಡ ಈಗ ಕೊಂಚ ಆತ್ಮ ವಿಶ್ವಾಸದಿಂದ ಬೀಗುತ್ತಿದೆ. ಅಭ್ಯಾಸ ಪಂದ್ಯಗಳಲ್ಲಿ `ಹ್ಯಾಟ್ರಿಕ್~ ಗೆಲುವು ಪಡೆದಿರುವ `ಮಹಿ~ ಪಡೆಯಲ್ಲೆಗ ಉತ್ಸಾಹದ ಚಿಲುಮೆ ಚಿಮ್ಮುತ್ತಿದೆ. ಆದರೆ ಬಲವಾಗಿ ಕಾಡುತ್ತಿರುವ ಗಾಯಾಳುಗಳ ಸಮಸ್ಯೆಯ ಮಧ್ಯಯೇ   ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಬುಧವಾರ (ಇಂದು) ಗೆಲುವಿಗಾಗಿ ಕಸರತ್ತು ನಡೆಸಬೇಕಿದೆ.

ಒಂದು ತಿಂಗಳ ಹಿಂದೆ ಸಾಕಷ್ಟು ಕನಸು ಕಟ್ಟಿಕೊಂಡು ಇಂಗ್ಲೆಂಡ್ ಪ್ರವಾಸ ಬೆಳಸಿದ್ದ ಭಾರತಕ್ಕೆ ಆ್ಯಂಡ್ರ್ಯೂ ಸ್ಟ್ರಾಸ್ ಪಡೆ `ಶಾಕ್~ ನೀಡಿತ್ತು. ಈಗ ಟೆಸ್ಟ್ ಸರಣಿ ಸೋಲಿಗೆ ತಿರುಗೇಟು ನೀಡಲು ಭಾರತ  ಕಾತರದಲ್ಲಿದೆ.

ಅಭ್ಯಾಸ ಪಂದ್ಯದಲ್ಲಿ ಸತತ ಮೂರು ಗೆಲುವು ಪಡೆದಿರುವ ಭಾರತ ತಂಡ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. ಆದ್ದರಿಂದ ಯುವ ಆಟಗಾರರನ್ನು ಕಣಕ್ಕಿಳಿಸಲು ದೋನಿ ಚಿಂತನೆ ನಡೆಸಿದ್ದಾರೆ. ಮೊದಲೆರೆಡು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

ಸೋಮವಾರದ ಪಂದ್ಯದಲ್ಲಿ ಪಾರ್ಥಿವ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಇಂದಿನ ಪಂದ್ಯಕ್ಕೆ ಯಾರನ್ನು ಆರಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ ದೋನಿ. ಆದರೆ, ಟೆಸ್ಟ್‌ನಲ್ಲಿ ಅಗ್ರಪಟ್ಟ ಪಡೆದಿರುವ ಇಂಗ್ಲೆಂಡ್ ಹೆಚ್ಚು ಆತ್ಮ ವಿಶ್ವಾಸ ಹೊಂದಿದೆ. ಮಹಿ ಪಡೆ ಎದುರಿಸುತ್ತಿರುವ ಗಾಯದ ಸಮಸ್ಯೆ ಆತಿಥೇಯರಿಗೆ ವರವಾಗಲಿದೆ.

ಗಾಯಾಳುಗಳ ಸಮಸ್ಯೆ: ಗಾಯದ ಕಾರಣದಿಂದ ಮೊದಲೆರೆಡು ಟೆಸ್ಟ್‌ನಿಂದ ಹೊರಗುಳಿದಿದ್ದ ವೀರೇಂದ್ರ ಸೆಹ್ವಾಗ್ ಹಾಗೂ ಇಶಾಂತ್ ಶರ್ಮ ಏಕದಿನ ಸರಣಿಯಿಂದ `ಔಟ್~ ಆಗಿದ್ದಾರೆ. ಇವರ ಬದಲಿಗೆ ಸ್ಥಾನ ಪಡೆದಿರುವ ಅಜಿಂಕ್ಯ ರಹಾನೆ ಹಾಗೂ ವೇಗಿ ವರುಣ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆದ್ದರಿಂದ ಯುವ ಆಟಗಾರರನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಭಾರತ ಹೊಂದಿದೆ.

ಪಂದ್ಯದ ಆರಂಭ ರಾತ್ರಿ 10.30  (ಭಾರತೀಯ ಕಾಲಮಾನ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.