ಮುಂಬೈ: ಭಾರತದ ಕ್ರೀಡಾ ಜಗತ್ತಿಗೆ ಕಾರ್ಪೊರೇಟ್ ಬೆಂಬಲ ಹಾಗೂ ವೃತ್ತಿಪರತೆಯ ಅಗತ್ಯವಿದೆ ಎಂದು ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಬುಧವಾರ ಹೇಳಿದರು.
ಜೆಎಸ್ಡಬ್ಲ್ಯು ಸಮೂಹ ಸಂಸ್ಥೆ ಪ್ರಕಟಿಸಿರುವ ‘ಬಿಯಾಂಡ್ ದಿ ಬೋರ್ಡ್ರೂಮ್’ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಇಲ್ಲಿ ಮಾತನಾಡಿದರು.
‘ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ವೃತ್ತಿಪರವಾಗಿ ಆಯೋಜನೆಯಾಗುತ್ತಿದೆ. ಆದ್ದರಿಂದ ಅದು ಇಷ್ಟು ಯಶಸ್ವಿಯಾಗಿದೆ. ಯಾವುದೇ ಕ್ರೀಡಾಪಟುವಿಗೆ ತನ್ನಲ್ಲಿನ ಸಾಮರ್ಥ್ಯ ತೋರಿಸುವ ಅವಕಾಶ ಸಿಗಬೇಕು. ಭಿನ್ನಾಭಿಪ್ರಾಯಗಳಿಂದಾಗಿ ಆತನಿಗೆ ಸಿಗಬೇಕಾದ ಅವಕಾಶ ಕಸಿದುಕೊಳ್ಳಬಾರದು’ ಎಂದು ಹೇಳಿದರು.
‘ಯಾವುದೇ ಕ್ರೀಡಾಪಟುವಾಗಿರಲಿ, ಆತ ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಬೇಕೆಂಬುದಷ್ಟೇ ಕಾರ್ಪೊರೇಟ್ ಸಂಸ್ಥೆಗಳ ಉದ್ದೇಶವಾಗಿರುತ್ತದೆ. ಆದ್ದರಿಂದ, ಕ್ರೀಡಾ ಜಗತ್ತಿಗೆ ಉದ್ಯಮ ಸಂಸ್ಥೆಗಳ ಪ್ರವೇಶದಿಂದ ಅನೇಕ ಪ್ರತಿಭೆಗಳು ಬೆಳೆಯುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಆಟಗಾರರಿಗೆ ಬೇಕಾದ ಸೌಲಭ್ಯಗಳ ಗುಣಮಟ್ಟದಲ್ಲಿ ಹಿಂದೆಂದೂ ಕಾಣದ ಬದಲಾವಣೆಯಾಗಿದೆ. ಇದಕ್ಕೆ ಕಾರಣ ಕಾರ್ಪೊರೇಟ್ ಸಂಸ್ಥೆಗಳು’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.