ನವದೆಹಲಿ: ಕೀನ್ಯಾ ವಿರುದ್ಧ ತಮ್ಮ ನೂರನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರಿಗೆ ಅನೇಕ ಕ್ರೀಡಾ ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ.
ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂ ಲ್ಕರ್ ಅವರು ‘ಇದೊಂದು ವಿಶೇಷ ಗೆಲುವು. ಆಡಿದ ನೂರನೇ ಪಂದ್ಯ ದಲ್ಲಿ ಎರಡು ಗೋಲು ಗಳಿಸಿದ ಚೆಟ್ರಿ ಅವರು ಅಮೋಘ ಸಾಧನೆ ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
‘ಭಾರತಕ್ಕೆ ಅರ್ಹ ಗೆಲುವು ಸಿಕ್ಕಿದೆ. ಕೀನ್ಯಾ ವಿರುದ್ಧ ಗೆಲುವಿನ ಸಿಹಿ ಉಂಡ ಭಾರತ ತಂಡಕ್ಕೆ ಅಭಿನಂದನೆಗಳು. ಚೆಟ್ರಿ ಅವರು ಗಳಿಸಿದ ಗೋಲುಗಳು ಸೊಗಸಾಗಿದ್ದವು’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರೂ ಟ್ವೀಟ್ ಮಾಡಿದ್ದಾರೆ.
ಚೆಟ್ರಿ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುವ ಭಾರತದ ಹಿರಿಯ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ, ‘ಭಾರತವನ್ನು 100 ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಚೆಟ್ರಿ ಅಭಿನಂದನೆಗೆ ಅರ್ಹರು. ಈ ಗೌರವಕ್ಕೆ ಪಾತ್ರರಾಗಲು ನೀವು ಇಲ್ಲಿಯವರೆಗೆ ಸಾಕಷ್ಟು ದೂರ ನಡೆದು ಬಂದಿದ್ದೀರಿ. ನಿಮ್ಮ ಬೆಳವಣಿಗೆಗೆ ನಾನು ಸಾಕ್ಷಿಯಾಗಿದ್ಧೇನೆ. ನೀವೊಬ್ಬ ಪ್ರತಿಭಾನ್ವಿತ ಆಟಗಾರ’ ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ.
ಭಾರತದ ಕ್ರಿಕೆಟ್ನ ಹಿರಿಯ ಆಟಗಾರರಾಗಿರುವ ವಿ.ವಿ.ಎಸ್. ಲಕ್ಷಣ್ ಹಾಗೂ ವಿರೇಂದ್ರ ಸೆಹ್ವಾಗ್ ಕೂಡ ಚೆಟ್ರಿ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
‘ಎಂತಹ ಅದ್ಭುತ ಜಯ. ಎರಡು ಗೋಲು ಗಳಿಸಿ ನಿಮ್ಮ 100ನೇ ಪಂದ್ಯವನ್ನು ಸವಿಯಾಗಿಸಿಕೊಂಡಿದ್ದೀರಿ. ನಿಮ್ಮ ಮನವಿಗೆ ಎಂತಹ ಅತ್ಯುತ್ತಮ ಬೆಂಬಲ ದೊರೆತಿದೆ. ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಜನರಿಗೆ ಗೆಲುವಿನ ಕಾಣಿಕೆ ಕೊಟ್ಟಿದ್ಧೀರಿ’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.