ADVERTISEMENT

`ಚೆನ್ನಾಗಿ ಆಡಬೇಕೆಂಬ ಹುಮ್ಮಸ್ಸುಆಟಗಾರರಲ್ಲಿರಲಿ'

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಮಂಗಳೂರು: `ಆಟಗಾರರಿಗೆ ಬೇಕಾದ ಸೌಲಭ್ಯಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಒದಗಿಸುತ್ತದೆ. ಆದರೆ ಚೆನ್ನಾಗಿ ಆಡಲೇಬೇಕೆಂಬ ಹುಮ್ಮಸ್ಸನ್ನು ಆಟಗಾರರು ಹೊಂದಿರಬೇಕು' ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಕಿವಿಮಾತು ಹೇಳಿದರು.

ನಗರದ ಹೊರವಲಯದಲ್ಲಿರುವ ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಸೋಮವಾರ ಆರ್‌ಸಿ- ಕೆಎಸ್‌ಸಿಎ ಕ್ರಿಕೆಟ್ ಅಕಾಡೆಮಿ ಮಂಗಳೂರು ಕೇಂದ್ರದ ಉದ್ಘಾಟನೆಗೆ ಮೊದಲು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ರಣಜಿ ತಂಡ ಈ ಋತುವಿನ ಹೆಚ್ಚಿನ ಪಂದ್ಯಗಳಲ್ಲಿ ಪರದಾಡಿದ ಹಿನ್ನೆಲೆಯಲ್ಲಿ ಹೀಗೆ ಹೇಳಿದರು.

ಈಗಾಗಲೇ ಬೆಂಗಳೂರು, ಮೈಸೂರು, ಹಾಸನದಲ್ಲಿ ಆರ್‌ಸಿ- ಕೆಎಸ್‌ಸಿಎ ಅಕಾಡೆಮಿಗಳು ಆರಂಭವಾಗಿವೆ. ಈ ತಿಂಗಳು ಹುಬ್ಬಳ್ಳಿಯಲ್ಲಿ, ಹರಿಯಾಣ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದ ಸಂದರ್ಭದಲ್ಲಿ ಅಲ್ಲೂ ಅಕಾಡೆಮಿಗೆ ಚಾಲನೆ ನೀಡಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಚಿಕ್ಕಮಗಳೂರು, ರಾಯಚೂರು, ಬೆಳಗಾವಿಯಲ್ಲಿ ಅಕಾಡೆಮಿಗಳು ಆರಂಭವಾಗಲಿವೆ ಎಂದು ಅವರು ವಿವರಿಸಿದರು.

ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ, ಅಕಾಡೆಮಿ ನಿರ್ದೇಶಕ  ಎಸ್.ಎಂ.ಎಚ್.ಕಿರ್ಮಾನಿ, ಸಹಾಯಕ ನಿರ್ದೇಶಕ ಕಾರ್ತಿಕ್ ಜಸ್ವಂತ್, ಮುಖ್ಯ ಕೋಚ್ ಪಿ.ವಿ.ಶಶಿಕಾಂತ್, ಕೆಎಸ್‌ಸಿಎ ಖಜಾಂಚಿ ತಲ್ಲಂ ವೆಂಕಟೇಶ್, ನಿಟ್ಟೆ ವಿ.ವಿ. ಸಹ ಕುಲಾಧಿಪತಿ ಡಾ.ಶಾಂತಾರಾಮಶೆಟ್ಟಿ, ಸಹ್ಯಾದ್ರಿ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಮಂಜುನಾಥ ಭಂಡಾರಿ, ವಲಯ ಅಧ್ಯಕ್ಷ ದಯಾನಂದ ಪೈ, ವಲಯ ಸಂಚಾಲಕ ಡಾ.ಶ್ರೀಕಾಂತ್ ರೈ, ರಾಯಲ್ ಚಾಲೆಂಜರ್ಸ್ ಉಪಾಧ್ಯಕ್ಷ ರಸೆಲ್ ಆಡಮ್ಸ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.