ADVERTISEMENT

ಪತ್ರಕರ್ತರ ಕ್ರಿಕೆಟ್ ಟೂರ್ನಿ: ಸೆಮಿಗೆ ತುಮಕೂರು, ಕೋಲಾರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಚಿಕ್ಕಮಗಳೂರು: ತುಮಕೂರು ಮತ್ತು ಕೋಲಾರ ತಂಡಗಳು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಸೆಮಿಫೈನಲ್ ಪ್ರವೇಶಿಸಿವೆ.

ನಗರದ ನೇತಾಜಿ ಸುಭಾಷಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆರಂಭವಾದ ಟೂರ್ನಿಯಲ್ಲಿ ತುಮಕೂರು ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಹಾಸನ ತಂಡವನ್ನು 65 ರನ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.

ತುಮಕೂರು ತಂಡ 8 ಓವರುಗಳಲ್ಲಿ 92 ರನ್ ಬಾರಿಸಿದರೆ, ಹಾಸನ ತಂಡ ನಿಗದಿ ಓವರುಗಳಲ್ಲಿ 7 ವಿಕೆಟ್‌ಗೆ 27 ರನ್ ಮಾತ್ರ ಗಳಿಸಿತು. ತುಮಕೂರಿನ ಮಧು ಮತ್ತು ಚೇತನ್ ತಲಾ ಮೂರು ವಿಕೆಟ್ ಪಡೆದರು.

ಕೋಲಾರ ತಂಡ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಬೆಂಗಳೂರು ನಗರ ತಂಡದ ವಿರುದ್ಧ ಹತ್ತು ವಿಕೆಟ್‌ಗಳಿಂದ ಜಯಗಳಿಸಿದರು. ಬೆಂಗಳೂರು ನಗರ 19 ರನ್‌ಗಳಿಗೆ ಉರುಳಿದರೆ, ಕೋಲಾರ ತಂಡ ಕೇವಲ 3 ಓವರ್‌ಗಳಲ್ಲಿ ಗುರಿ ತಲುಪಿತು.

ಬಾಗಲಕೋಟೆ ವಿರುದ್ಧ ಗೆಲುವು ಸಾಧಿಸಿರುವ ಮಡಿಕೇರಿ ತಂಡ, ಬೆಂಗಳೂರು ಗ್ರಾಮಾಂತರ ವಿರುದ್ಧ ಜಯಗಳಿಸಿರುವ ಮಂಡ್ಯ ವಿರುದ್ಧ ಭಾನುವಾರ ಕ್ವಾರ್ಟರ್ ಫೈನಲ್ ಆಡಲಿದೆ. ಬೈ ಪಡೆದಿರುವ ಆತಿಥೇಯ ಚಿಕ್ಕಮಗಳೂರು ತಂಡ ಮತ್ತು ಶಿವಮೊಗ್ಗ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಸೆಣಸಲಿವೆ.

ಟೂರ್ನಿಯಲ್ಲಿ 12 ಜಿಲ್ಲಾ ತಂಡಗಳು ಭಾಗವಹಿಸಿವೆ. ಬಾಗಲಕೋಟೆ, ಮೈಸೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.