ಮುಂಬೈ (ಪಿಟಿಐ/ಐಎಎನ್ಎಸ್): ಎನ್. ಶ್ರೀನಿವಾಸನ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿ ಸೋಮವಾರ ಆಧಿಕಾರ ವಹಿಸಿಕೊಂಡರು. ಮುಂಬೈನಲ್ಲಿ ನಡೆದ ಮಂಡಳಿಯ 82ನೇ ವಾರ್ಷಿಕ ಮಹಾ ಸಭೆಯಲ್ಲಿ ವಿವಿಧ ಪದಾಧಿಕಾರಿಗಳ ನೇಮಕ ನಡೆಯಿತು.
ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶ್ರೀನಿವಾಸನ್ ಇನ್ನು ಮುಂದೆ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಅಧಿಕಾರ ನೋಡಿಕೊಳ್ಳಲಿದ್ದಾರೆ. ಶಶಾಂಕ್ ಮನೋಹರ್ ಅವರ ಅಧಿಕಾರದ ಅವಧಿಯಲ್ಲಿ ಶ್ರೀನಿವಾಸನ್ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಮಂಡಳಿಯ 81ನೇ ವಾರ್ಷಿಕ ಮಹಾಸಭೆಯಲ್ಲೇ ಶ್ರೀನಿವಾಸನ್ ಮುಂದಿನ ಅಧ್ಯಕ್ಷ ಎಂಬುದನ್ನು ನಿರ್ಧರಿಸಲಾಗಿತ್ತು. ನಿರೀಕ್ಷೆಯಂತೆಯೇ ಸೋಮವಾರ ಮಹಾಸಭೆಯಲ್ಲಿ ಚುನಾವಣೆ ನಡೆಯಲಿಲ್ಲ. ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಪ್ರಸಕ್ತ ಜಂಟಿ ಕಾರ್ಯದರ್ಶಿಯಾಗಿದ್ದ ಸಂಜಯ್ ಜಗದಾಳೆ ನೂತನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಅನುರಾಗ್ ಠಾಕೂರ್ ಜಂಟಿ ಕಾರ್ಯದರ್ಶಿಯಾಗಿಯೂ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಯ್ ಶಿರ್ಕೆ ಖಜಾಂಚಿಯಾಗಿಯೂ ಅಧಿಕಾರ ಸ್ವೀಕರಿಸಿಕೊಂಡರು.
ಅರುಣ್ ಜೇಟ್ಲಿ (ಉತ್ತರ ವಲಯ), ಎನ್. ಶಿವಲಾಲ್ ಯಾದವ್ (ದಕ್ಷಿಣ), ಚಿತ್ರಕ್ ಮಿತ್ರಾ (ಪೂರ್ವ), ನಿರಂಜನ್ ಶಾ (ಪಶ್ಚಿಮ) ಮತ್ತು ಸುಧೀರ್ ದಬಿರ್ (ಕೇಂದ್ರ ವಲಯ) ಉಪಾಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸುವರು.
ಐಪಿಎಲ್ ಮುಖ್ಯಸ್ಥರಾಗಿ ಶುಕ್ಲಾ: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಆಡಳಿತ ಮಂಡಳಿಯ ಪುನರ್ರಚನೆ ಸಭೆಯಲ್ಲಿ ನಡೆಯಿತು. ರಾಜೀವ್ ಶುಕ್ಲಾ ಐಪಿಎಲ್ನ ಮುಖ್ಯಸ್ಥರಾಗಿ ನೇಮಕಗೊಂಡರು. ಈಗ ಮುಖ್ಯಸ್ಥರಾಗಿರುವ ಚಿರಾಯು ಅಮಿನ್ ಸ್ಥಾನ ತೊರೆಯಲು ನಿರ್ಧರಿಸಿದ್ದರು.
ಆಯ್ಕೆ ಸಮಿತಿಗೆ ಅಮರ್ನಾಥ್: ಮಾಜಿ ಆಟಗಾರ ಮೊಹಿಂದರ್ ಅಮರ್ನಾಥ್ ಐವರು ಸದಸ್ಯರ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಉತ್ತರ ವಲಯದ ಪ್ರತಿನಿಧಿ ಯಶ್ಪಾಲ್ ಶರ್ಮ ಅವರ ಅವಧಿ ಕೊನೆಗೊಂಡ ಕಾರಣ ಆ ಸ್ಥಾನಕ್ಕೆ ಅಮರ್ನಾಥ್ ನೇಮಕ ನಡೆದಿದೆ.
ಕೃಷ್ಣಮಾಚಾರಿ ಶ್ರೀಕಾಂತ್ ಮುಖ್ಯಸ್ಥರಾಗಿ ಮುಂದುವರಿದಿದ್ದು, ಸುರೇಂದ್ರ ಭಾವೆ (ಪಶ್ಚಿಮ ವಲಯ) ನರೇಂದ್ರ ಹಿರ್ವಾನಿ (ಕೇಂದ್ರ ವಲಯ) ಮತ್ತು ರಾಜಾ ವೆಂಕಟ್ (ಪೂರ್ವ ವಲಯ) ಇನ್ನೊಂದು ವರ್ಷದ ಅವಧಿಗೆ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ತಾಂತ್ರಿಕ ಸಮಿತಿ ಮುಖ್ಯಸ್ಥರಾಗಿ ಗಂಗೂಲಿ?: ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಮಂಡಳಿಯ ತಾಂತ್ರಿಕ ಸಮಿತಿಯ ಮುಖ್ಯಸ್ಥನ ಹುದ್ದೆ ನೀಡಲು ಬಿಸಿಸಿಐ ಆಸಕ್ತಿ ತೋರಿದೆ. ಈ ಕುರಿತು ಮಂಡಳಿಯು ಅವರನ್ನು ಸಂಪರ್ಕಿಸಿದೆ. ಇದುವರೆಗೆ ಮುಖ್ಯಸ್ಥರಾಗಿದ್ದ ಸುನಿಲ್ ಗಾವಸ್ಕರ್ ಹುದ್ದೆಯಿಂದ ಕೆಳಗಿಳಿಯವುದಾಗಿ ತಿಳಿಸಿದ್ದರು.
`ನಾನು ಕಳೆದ ಏಳು ವರ್ಷಗಳಿಂದ ಸಮಿತಿಯಲ್ಲಿದ್ದೇನೆ. ಆದ್ದರಿಂದ ಹೊಸಬರಿಗೆ ಅವಕಾಶ ನೀಡಬೇಕೆಂದು ಕೋರಿ ಗಾವಸ್ಕರ್ ಪತ್ರ ಬರೆದಿದ್ದರು. ಗಂಗೂಲಿ ಅವರನ್ನು ಮುಖ್ಯಸ್ಥನಾಗಿ ನೇಮಿಸುವುದು ನಮ್ಮ ಉದ್ದೇಶ. ಅವರು ಒಪ್ಪಿಗೆ ಸೂಚಿಸುವರು ಎಂಬ ವಿಶ್ವಾಸವಿದೆ~ ಎಂದು ಶ್ರೀನಿವಾಸನ್ ನುಡಿದರು.
ಬಿಸಿಸಿಐ ಪದಾಧಿಕಾರಿಗಳ ವಿವರ: ಎನ್. ಶ್ರೀನಿವಾಸನ್ (ಅಧ್ಯಕ್ಷ), ಸಂಜಯ್ ಜಗದಾಳೆ (ಕಾರ್ಯದರ್ಶಿ), ಅನುರಾಗ್ ಠಾಕೂರ್ (ಜಂಟಿ ಕಾರ್ಯದರ್ಶಿ), ಅಜಯ್ ಶಿರ್ಕೆ (ಖಜಾಂಚಿ).
ಉಪಾಧ್ಯಕ್ಷರು: ಅರುಣ್ ಜೇಟ್ಲಿ (ಉತ್ತರ ವಲಯ), ಎನ್. ಶಿವಲಾಲ್ ಯಾದವ್ (ದಕ್ಷಿಣ), ಚಿತ್ರಕ್ ಮಿತ್ರಾ (ಪೂರ್ವ), ನಿರಂಜನ್ ಶಾ (ಪಶ್ಚಿಮ), ಸುಧೀರ್ ದಬಿರ್ (ಕೇಂದ್ರ ವಲಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.