ವಂಗಾರೆ, ನ್ಯೂಜಿಲೆಂಡ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳು ಅಭ್ಯಾಸ ಪಂದ್ಯದಲ್ಲೂ ಎಡವಿದರು. ಸೋಮವಾರ ಇಲ್ಲಿ ಡ್ರಾನಲ್ಲಿ ಕೊನೆಗೊಂಡ ನ್ಯೂಜಿ ಲೆಂಡ್ ಇಲೆವೆನ್ ಎದುರಿನ ಪಂದ್ಯದಲ್ಲಿ ಮಿಂಚಿದ್ದು ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ.
ಕೋಬ್ಹಮ್ ಓವಲ್ ಕ್ರೀಡಾಂಗಣ ದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ತಂಡದ 262 ರನ್ಗಳಿಗೆ ಉತ್ತರವಾಗಿ ಭಾರತ ತಂಡದವರು ತಮ್ಮ ಮೊದಲ ಇನಿಂಗ್ಸ್ನಲ್ಲಿ 93 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದರು. ಪಂದ್ಯದ ಎರಡನೇ ಹಾಗೂ ಅಂತಿಮ ದಿನದ ಬೆಳಿಗ್ಗೆ ಪ್ರವಾಸಿ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಅಲ್ಪ ಮೊತ್ತಕ್ಕೆ ಔಟಾದರು. ಶಿಖರ್ ರನ್ಔಟ್ ಆದರು. ಆಗ ತಂಡದ ಮೊತ್ತ 63ಕ್ಕೆ 2. ಧವನ್ ಏಕದಿನ ಸರಣಿಯಲ್ಲೂ ವಿಫಲರಾ ಗಿದ್ದರು. ಭರವಸೆಯ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಈ ಹಂತದಲ್ಲಿ ಜೊತೆಗೂಡಿದ ರೋಹಿತ್ (59; 101 ಎಸೆತ, 7 ಬೌಂಡರಿ) ಹಾಗೂ ಅಜಿಂಕ್ಯ (60; 97 ಎಸೆತ, 5 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಆಸರೆಯಾದರು. ಇವರಿಬ್ಬರು ನಾಲ್ಕನೇ ವಿಕೆಟ್ಗೆ 99 ರನ್ ಸೇರಿಸಿದರು. ಅರ್ಧ ಶತಕ ಗಳಿಸಿದ ಇವರಿಬ್ಬರು ಉಳಿದ ಬ್ಯಾಟ್ಸ್ಮನ್ಗಳಿಗೆ ಅವಕಾಶ ಮಾಡಿಕೊಡಲು ಪೆವಿಲಿಯನ್ಗೆ ಮರಳಿದರು. ಬಳಿಕ ಅಂಬಟಿ ರಾಯುಡು ಹಾಗೂ ಆರ್.ಅಶ್ವಿನ್ ನೆರವಾದರು.
ರಾಯುಡು (ಔಟಾಗದೆ 49; 93 ಎಸೆತ, 5 ಬೌಂಡರಿ) ಹಾಗೂ ಅಶ್ವಿನ್ (46; 51 ಎಸೆತ, 6 ಬೌಂಡರಿ, 2 ಸಿಕ್ಸರ್) ಏಳನೇ ವಿಕೆಟ್ಗೆ 66 ರನ್ ಸೇರಿ ಸಿದರು. ಅಶ್ವಿನ್ ಬಿರುಸಿನ ಆಟಕ್ಕೆ ಮುಂ ದಾದರು. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಬೇಗನೇ ವಿಕೆಟ್ ಒಪ್ಪಿಸಿದರು.
ಪಂದ್ಯದ ಬಳಿಕ ಮಾತನಾಡಿದ ರೋಹಿತ್, ‘ಟೆಸ್ಟ್ ಸರಣಿಗೆ ಸಜ್ಜಾಗಲು ಈ ಅಭ್ಯಾಸ ಪಂದ್ಯ ನೆರವಾಗಿದೆ. ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ನಾವೀಗ ಟೆಸ್ಟ್ ಪಂದ್ಯಕ್ಕೆ ಸಿದ್ಧವಾಗಿದ್ದೇವೆ’ ಎಂದರು.
‘ಬೌಲಿಂಗ್ ವಿಭಾಗದಲ್ಲೂ ಉತ್ತಮ ಪ್ರದರ್ಶನ ಮೂಡಿಬಂದಿದೆ. ಈಶ್ವರ್ ಪಾಂಡೆ ತಮ್ಮ ಸಾಮರ್ಥ್ಯ ತೋರಿದರು. ಇಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಬೌಲ್ ಮಾಡಿ ಮೂರು ವಿಕೆಟ್ ಕಬಳಿಸಿದರು. ಉಳಿದವರಿಗೂ ಉತ್ತಮ ಅಭ್ಯಾಸ ಲಭಿಸಿದೆ’ ಎಂದು ಅವರು ಹೇಳಿದರು.
ಮತ್ತೆ ವಿಫಲರಾದ ಧವನ್ ಹಾಗೂ ವಿಜಯ್ ಅವರನ್ನು ರೋಹಿತ್ ಸಮರ್ಥಿ ಸಿಕೊಂಡರು. ‘ಇವರಿಬ್ಬರು ಹೆಚ್ಚು ಹೊ ತ್ತು ಬ್ಯಾಟ್ ಮಾಡದ್ದು ನಮ್ಮಲ್ಲಿ ಆತಂಕ ಮೂಡಿಸಿಲ್ಲ. ಏಕೆಂದರೆ ಒಂದು ಉತ್ತಮ ಇನಿಂಗ್ಸ್ ಮೂಡಿಬಂದಲ್ಲಿ ಎಲ್ಲವೂ ಬದಲಾಗಲಿದೆ’ ಎಂದರು. ಆಕ್ಲೆಂಡ್ನಲ್ಲಿ ಗುರುವಾರ ನ್ಯೂಜಿಲೆಂಡ್ ಎದುರು ಮೊದಲ ಟೆಸ್ಟ್ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.