ಕೇಪ್ಟೌನ್ (ಪಿಟಿಐ): ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್ ಮತ್ತು ಯಾರ್ಕ್ಷೈರ್ ತಂಡಗಳು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗುರುವಾರ ಪರಸ್ಪರ ಎದುರಾಗಲಿವೆ.
ಹರಭಜನ್ ಸಿಂಗ್ ನೇತೃತ್ವದ ಮುಂಬೈ ಮೊದಲ ಪಂದ್ಯದಲ್ಲಿ ಹೈವೆಲ್ಡ್ ಲಯನ್ಸ್ ಎದುರು ಪರಾಭವಗೊಂಡಿದ್ದರೆ, ಯಾರ್ಕ್ಷೈರ್ ತಂಡ ಸಿಡ್ನಿ ಕೈಯಲ್ಲಿ ಸೋಲು ಅನುಭವಿಸಿತ್ತು. ಆದ್ದರಿಂದ ಗೆಲುವಿನ ಹಾದಿಗೆ ಮರಳುವ ವಿಶ್ವಾಸದೊಂದಿಗೆ ಉಭಯ ತಂಡಗಳು ಇಂದು ಕಣಕ್ಕಿಳಿಯಲಿವೆ.
ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆದರೆ ಬೌಲರ್ಗಳು ಸಮರ್ಥ ದಾಳಿ ನಡೆಸುವಲ್ಲಿ ವಿಫಲರಾಗಿದ್ದರು. ಇದರಿಂದ ಸೋಲು ಎದುರಾಗಿತ್ತು. ನಾಯಕ ಹರಭಜನ್ ಮತ್ತು ಪ್ರಗ್ಯಾನ್ ಓಜಾ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರು.
ಲಸಿತ್ ಮಾಲಿಂಗ ಹಾಗೂ ಮಿಷೆಲ್ ಜಾನ್ಸನ್ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಅವರಿಗೆ ಇತರರಿಂದ ಸೂಕ್ತ ಬೆಂಬಲ ಲಭಿಸಲಿಲ್ಲ. ಈ ಕಾರಣ ಬೌಲಿಂಗ್ ವಿಭಾಗದಲ್ಲಿ ಕೆಲವೊಂದು ಹೊಸ ಯೋಜನೆಗಳನ್ನು ರೂಪಿಸುವ ಅನಿವಾರ್ಯತೆ ಮುಂಬೈಗೆ ಎದುರಾಗಿದೆ.
ಈ ತಂಡ ಸಚಿನ್ ತೆಂಡೂಲ್ಕರ್ ಅವರಿಂದ ಉತ್ತಮ ಆರಂಭ ನಿರೀಕ್ಷಿಸುತ್ತಿದೆ. ಕಳೆದ ಪಂದ್ಯದಲ್ಲಿ ಅವರು 24 ಎಸೆತಗಳಲ್ಲಿ 16 ರನ್ ಗಳಿಸಿದ್ದರು. ಸಚಿನ್ ಅವರು ಡ್ವೇನ್ ಸ್ಮಿತ್ ಅಥವಾ ರಿವರ್ಡ್ ಲೆವಿ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಸಚಿನ್ ಅಲ್ಲದೆ ರೋಹಿತ್ ಶರ್ಮ, ಅಂಬಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ಅವರು ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ಧೈರ್ಯದಿಂದ ಎದುರಿಸಿ ನಿಲ್ಲುವುದು ಅಗತ್ಯ.
ಇಂದಿನ ಪಂದ್ಯಗಳು
ಹೈವೆಲ್ಡ್ ಲಯನ್ಸ್- ಸಿಡ್ನಿ ಸಿಕ್ಸರ್ಸ್
ಆರಂಭ: ಸಂಜೆ 5.00ಕ್ಕೆ
ಮುಂಬೈ ಇಂಡಿಯನ್ಸ್- ಯಾರ್ಕ್ಶೈರ್
ಆರಂಭ: ರಾತ್ರಿ 9.00ಕ್ಕೆ
ಸ್ಥಳ: ಕೇಪ್ಟೌನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.