ADVERTISEMENT

ಮೊದಲ ರಣಜಿಯಲ್ಲೇ ಯಶಸ್ಸು ಕಂಡ ಶ್ರೇಯಸ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST

ಬೆಂಗಳೂರು: ‘ವೈಯಕ್ತಿಕ ಸಾಧನೆ ಏನೇ ಇರಲಿ. ನಾನು ತೋರಿದ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಖುಷಿಗೆ ಕಾರಣವಾಗಿದೆ. ಹಿರಿಯ ಆಟಗಾರರ ಸಲಹೆ ಮತ್ತು ಬೆಂಬಲ ಲಭಿಸಿದ್ದರಿಂದ ಉತ್ತರ ಪ್ರದೇಶದ ಎದುರು ಉತ್ತಮವಾಗಿ ಬೌಲ್‌ ಮಾಡಲು ಸಾಧ್ಯವಾಯಿತು...’
ಕರ್ನಾಟಕ ತಂಡ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 20 ವರ್ಷದ ಶ್ರೇಯಸ್‌ ಗೋಪಾಲ್‌ ಹೇಳಿದ ಮಾತಿದು.

ಮೊದಲ ರಣಜಿ ಟೂರ್ನಿ ಆಡುತ್ತಿರುವ ಶ್ರೇಯಸ್‌ ತಾವಾಡಿದ ಮೂರೂ ಪಂದ್ಯಗಳಲ್ಲಿ ಯಶಸ್ಸು ಕಂಡಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ನಡೆದ ಹಾಲಿ ಚಾಂಪಿಯನ್‌ ಮುಂಬೈ ಎದುರಿನ ಪಂದ್ಯದಲ್ಲೂ ಎರಡೂ ಇನಿಂಗ್ಸ್‌ ಸೇರಿ ಐದು ವಿಕೆಟ್‌ ಪಡೆದಿದ್ದರು. ದೆಹಲಿ ಎದುರು ನಡೆದ ಕೊನೆಯ ಲೀಗ್‌ ಪಂದ್ಯದಲ್ಲೂ ಐದು ವಿಕೆಟ್‌ ಕಬಳಿಸಿದ್ದರು. ಈ ಪಂದ್ಯದಲ್ಲೂ ಐದು ವಿಕೆಟ್‌ ಪಡೆದರು. ಮೂರೂ ಪಂದ್ಯ ಸೇರಿ ಒಟ್ಟು 15 ವಿಕೆಟ್‌ ಉರುಳಿಸಿ ಭರವಸೆಯಾಗಿ ಹೊರಹೊಮ್ಮಿದ್ದಾರೆ.

ಕಳೆದ ರಣಜಿಯಲ್ಲಿ ಕರ್ನಾಟಕ ತಂಡ ಸ್ಪಿನ್‌ ವಿಭಾಗದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಕೆ.ಪಿ. ಅಪ್ಪಣ್ಣ ಮತ್ತು ಎಸ್‌.ಕೆ. ಮೊಯಿನುದ್ದೀನ್‌ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ, ಈ ಸಲ ರಣಜಿ ಆಡಲು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಶ್ರೇಯಸ್‌ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. 16 ವರ್ಷದೊಳಗಿನವರ ಕರ್ನಾಟಕ ತಂಡಕ್ಕೆ ಉಪನಾಯಕರಾಗಿದ್ದ ಶ್ರೇಯಸ್‌ ಚೆಂಡು ತಿರುಗಿಸುವಲ್ಲಿ ತಾಂತ್ರಿಕವಾಗಿ ಸಾಕಷ್ಟು ಪರಿಣತಿ ಹೊಂದಿದ್ದಾರೆ.

‘ರಣಜಿಯಲ್ಲಿ ಸ್ಥಾನ ಪಡೆಯಬೇಕೆ ನ್ನುವುದು ಬಹು ವರ್ಷಗಳ ಕನಸು. ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಬೇ ಕಾದ ಸವಾಲಿದೆ’ ಎಂದು ಶ್ರೇಯಸ್‌ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಲೆಗ್‌ ಸ್ಪಿನ್ನರ್‌ ಪ್ರೆಸಿಡೆನ್ಸಿ ಶಾಲೆ ಎದುರಿನ ಶಾಲಾ ಮಟ್ಟದ ಟೂರ್ನಿಯಲ್ಲಿ ಎರಡು ಸಲ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಈ ಆಟಗಾರ ಫ್ರಾಂಕ್‌ ಅಂಥೋನಿ ಪಬ್ಲಿಕ್‌ ಶಾಲಾ ತಂಡದ ಪರ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.