ADVERTISEMENT

ರನ್‌ಗಳ ಹೊಳೆಯಲ್ಲಿ ಈಜಿ ಗೆದ್ದ ರಾಯಲ್ಸ್‌

ಐಪಿಎಲ್: ಆರ್‌ಸಿಬಿಗೆ ನಿರಾಸೆ; ಅಜಿಂಕ್ಯ ಬಳಗಕ್ಕೆ ಜಯ: ಸಂಜು ಸ್ಯಾಮ್ಸನ್‌ ಅಜೇಯ 92

ಗಿರೀಶದೊಡ್ಡಮನಿ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಖರಿ. -ಪ್ರಜಾವಾಣಿ ಚಿತ್ರಗಳು/ ರಂಜು ಪಿ
ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಖರಿ. -ಪ್ರಜಾವಾಣಿ ಚಿತ್ರಗಳು/ ರಂಜು ಪಿ   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಅಕ್ಷರಶಃ ರನ್‌ಗಳ ಹೊಳೆಯೇ ಹರಿಯಿತು. ರಾಜಸ್ಥಾನ್ ರಾಯಲ್ಸ್‌ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಒಟ್ಟು 415 ರನ್‌ಗಳು ಹರಿದವು.

27 ಬೌಂಡರಿ ಮತ್ತು 21 ಸಿಕ್ಸರ್‌ಗಳು ಸಿಡಿದವು. ‘ವಿಕೆಂಡ್ ಮಜಾ ಅನುಭವಿಸಲು ಬಂದಿದ್ದ ಮೂವತ್ತನಾಲ್ಕು ಸಾವಿರ ಪ್ರೇಕ್ಷಕರಿಗೆ ಭರಪೂರ ಮನರಂಜನೆ ದೊರೆಯಿತು. ಆದರೆ, ಆರ್‌ಸಿಬಿ ಅಭಿಮಾನಿಗಳು ಸೋಲಿನ ಕಹಿಯನ್ನೂ ಅನುಭವಿಸಬೇಕಾಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿ ಲೆಕ್ಕಾಚಾರ ಫಲ ಕೊಡಲಿಲ್ಲ. ‘ವಿಶು ಹಬ್ಬ’ದಂದು ಮಿಂಚಿದ ಕೇರಳದ ಹುಡುಗ ಸಂಜು ಸ್ಯಾಮ್ಸನ್ (ಅಜೇಯ 92; 45ಎ; 2ಬೌಂ, 10 ಸಿ) ಅವರ ಆಟದ ಬಲದಿಂದ ರಾಜಸ್ಥಾನ್ ತಂಡವು 19 ರನ್‌ಗಳ ಜಯ ದಾಖಲಿಸಿತು.20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಗಳಿಸಿದ್ದ 217 ರನ್‌ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿಯು 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 198 ರನ್‌ಗಳನ್ನು ಗಳಿಸಿತು.

ADVERTISEMENT

ಇದುವರೆಗೆ ಮೂರು ಪಂದ್ಯಗಳನ್ನು ಆಡಿರುವ ರಾಜಸ್ಥಾನ್ ತಂಡವು ಎರಡನೇ ಗೆಲುವು ಸಾಧಿಸಿತು. ಅದೇ ವಿರಾಟ್ ಬಳಗವು ಎರಡನೇ ಸೋಲು ಅನುಭವಿಸಿತು.  ಹೋದ ಶುಕ್ರವಾರ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ವಿರಾಟ್ ಬಳಗವು 4 ವಿಕೆಟ್‌ಗಳಿಂದ ಸೋಲಿಸಿತ್ತು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (57; 30ಎ, 7ಬೌಂ, 2ಸಿ) ತಮ್ಮ ಎಂದಿನ ಲಯಕ್ಕೆ ಮರಳಿದ್ದು ಮತ್ತು  ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದು ತಂಡಕ್ಕೆ ಸಮಾಧಾನದ ಸಂಗತಿ. ಆದರೆ ಬೌಲರ್‌ಗಳು ಸಂಪೂರ್ಣ ಮಂಡಿಯೂರಿದ್ದು ಕೂಡ ಚಿಂತೆಯ ವಿಷಯ. ಆರಂಭಿಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಮ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.  ಆದರೆ ಕ್ವಿಂಟನ್ ಡಿ ಕಾಕ್ ಮಾತ್ರ ಮತ್ತೊಮ್ಮೆ ಮಿಂಚಿದರು.

ಕಳೆದ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದ ಸರ್ಫರಾಜ್ ಖಾನ್ ಅವರನ್ನು ಕೈಬಿಟ್ಟು  ಆಲ್‌ರೌಂಡರ್ ಪವನ್ ನೇಗಿ ಅವರಿಗೆ ಅವಕಾಶ ಕೊಟ್ಟಿದ್ದು ಹೆಚ್ಚು ಪ್ರಯೋಜನವಾಗಲಿಲ್ಲ. ಇತ್ತೀಚೆಗೆ ಮೇಲ್ಮೈ ದುರಸ್ತಿಯಾಗಿರುವ ಪಿಚ್‌ನಲ್ಲಿ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗಲಿಲ್ಲ.

ಸಂಜು ಸಂಚಲನ
ಸಂಜು ಸ್ಯಾಮ್ಸನ್ ಅವರು ಕ್ರೀಸ್‌ಗೆ ಬಂದಾಗ ರಾಜಸ್ಥಾನ್ ರಾಯಲ್ಸ್ ತಂಡವು 49 ರನ್‌ಗೆ 1 ವಿಕೆಟ್ ಕಳೆದುಕೊಂಡಿತ್ತು. ಡಾರ್ಸಿ ಶಾರ್ಟ್‌ ಜೊತೆಗೆ ಉತ್ತಮ ಆರಂಭ ನೀಡಿದ್ದ ಅಜಿಂಕ್ಯ ರಹಾನೆ (36; 20ಎ, 6ಬೌಂ,1ಸಿ) ಔಟಾಗಿದ್ದರು. ತಂಡದ ಖಾತೆಗೆ ಮತ್ತೆ ನಾಲ್ಕು ರನ್‌ಗಳು ಸೇರುವಷ್ಟರಲ್ಲಿ ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಡಾರ್ಸಿ ಶಾರ್ಟ್‌ ಕೂಡ (11 ರನ್) ಚಾಹಲ್ ಬೌಲಿಂಗ್‌ನಲ್ಲಿ ನಿರ್ಗಮಿಸಿದರು.

ಕ್ರೀಸ್‌ಗೆ ಬಂದ ಸ್ಫೋಟಕ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಅವರು ಬೌಲರ್‌ಗಳನ್ನು ಬೆಂಡೆತ್ತಲು ಆರಂಭಿಸಿದರು. ಇನ್ನೊಂದು ಬದಿಯಲ್ಲಿದ್ದ ಸಂಜು ಕೂಡ ಹುರುಪುಗೊಂಡರು. ಇದರಿಂದಾಗಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 49 ರನ್‌ಗಳು ಹರಿದುಬಂದವು.ಇಬ್ಬರ ಆಟಕ್ಕೆ ತಂಡವು 12 ಓವರ್‌ಗಳಲ್ಲಿಯ 100ರ ಗಡಿ ಮುಟ್ಟಿತು. ಆದರೆ ಚಾಹಲ್ ಹಾಕಿದ ನಿಧಾನಗತಿಯ ಎಸೆತಕ್ಕೆ ಬೆನ್ ಸ್ಟೋಕ್ಸ್‌ ಕ್ಲೀನ್‌ಬೌಲ್ಡ್‌ ಆದರು. ಅದರ ನಂತರ ಸಂಜು ಸ್ಯಾಮ್ಸನ್ ಆಟ ರಂಗೇರಿತು.  ಅವರೊಂದಿಗೆ ಸೇರಿದ ಜಾಸ್ ಬಟ್ಲರ್ ನಾಲ್ಕನೆ ವಿಕೆಟ್‌ಗೆ 73 ರನ್ ಸೇರಿಸಿದರು. ಕೇವಲ ಆರು ಓವರ್‌ಗಳಲ್ಲಿ ಈ ರನ್‌ಗಳು ಹರಿದುಬಂದವು.

ಪಂಜಾಬ್ ಎದುರಿನ ಪಂದ್ಯದಲ್ಲಿ ಮೂರು ವಿಕೆಟ್‌ ಕಿತ್ತು ಮಿಂಚಿದ್ದ ಉಮೇಶ್ ಯಾದವ್ ತಮ್ಮ ಮೊದಲ ಓವರ್‌ನಲ್ಲಿಯೇ 14 ರನ್‌ ತೆತ್ತರು. ನಂತರದ ಸ್ಪೆಲ್‌ನಲ್ಲಿಯೂ ಅವರು ಪರಿಣಾಮಕಾರಿಯಾಗಲಿಲ್ಲ.

ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಮೆಕ್ಲಮ್ ಅವರ ವಿಕೆಟ್‌ ಅನ್ನು ಮೊದಲ ಓವರ್‌ನಲ್ಲಿ ಕಳೆದುಕೊಂಡಿತು. ನಂತರ ಕೊಹ್ಲಿ ಮತ್ತು ಕ್ವಿಂಟನ್ ಅವರು ಎರಡನೇ ವಿಕೆಟ್‌ಗೆ 77 ರನ್‌ಗಳನ್ನು  ಸೇರಿಸಿದರು. ಇಬ್ಬರ ಅಬ್ಬರಕ್ಕೆ 8 ಓವರ್‌ಗಳಲ್ಲಿ 81 ರನ್‌ಗಳು ಸೇರಿದ್ದವು. ಕ್ವಿಂಟನ್ ಅವರು ಉನದ್ಕತ್ ಬೌಲಿಂಗ್‌ನಲ್ಲಿ ಔಟಾದರು. ನಂತರ ಜೊತೆಗೂಡಿದ ವಿರಾಟ್ ಮತ್ತು ಎಬಿ ಡಿವಿಲಿಯರ್ಸ್‌ ಕೂಡ ರನ್‌ ಸೂರೆ ಮಾಡತೊಡಗಿದರು.

ಆದರೆ ಬೆಂಗಳೂರು ಹುಡುಗ, ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ಅಜಿಂಕ್ಯ ರಹಾನೆ ಬೌಲಿಂಗ್‌ಗೆ ಇಳಿಸಿದರು. ಅದು ಫಲ ನೀಡಿತು. 11ನೇ ಓವರ್‌ನಲ್ಲಿ ವಿರಾಟ್ ಮತ್ತು 13ನೇ ಓವರ್‌ನಲ್ಲಿ ಎಬಿಡಿ ವಿಕೆಟ್‌ ಪಡೆದ ಶ್ರೇಯಸ್ ಮಿಂಚಿದರು.

ಈ ದಿನ ಅವಿಸ್ಮರಣೀಯ: ಶ್ರೇಯಸ್
ಬೆಂಗಳೂರು:
ನನ್ನ ಜೀವನದಲ್ಲಿಯೇ ಇದೊಂದು ಅವಿಸ್ಮರಣೀಯ ದಿನವಾಗಿದೆ. ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಅವರ ವಿಕೆಟ್‌ಗಳನ್ನು ಗಳಿಸಿದ್ದು ದೊಡ್ಡ ಸಾಧನೆಯಾಗಿದೆ ಎಂದು ರಾಜಸ್ಥಾನ್ ರಾಯಲ್ಸ್‌ ತಂಡದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸಂತಸ ವ್ಯಕ್ತಪಡಿಸಿದರು.

ಭಾನುವಾರ ಆರ್‌ಸಿಬಿ ಎದುರಿನ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಬ್ಬರೂ ಕ್ರಿಕೆಟ್ ಲೋಕದ ದಿಗ್ಗಜರು. ಅವರ ಮುಂದೆ ಬೌಲಿಂಗ್ ಮಾಡುವುದೇ ಸವಾಲಿನ ಕೆಲಸ. ಆದರೆ ಇವತ್ತು ನಮ್ಮ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಪೇರಿಸಿದ್ದರಿಂದ ಎದುರಾಳಿ ತಂಡದವರ ಮೇಲೆ ಒತ್ತಡವೂ ಇತ್ತು. ಪಿಚ್‌ ಕೂಡ ನಿಧಾನ ಎಸೆತಗಳಿಗೆ ಸ್ಪಂದಿಸುತ್ತಿತ್ತು. ಆದ್ದರಿಂದ ಯಶಸ್ಸು ಸಾಧ್ಯವಾಯಿತು’ ಎಂದು ಬೆಂಗಳೂರಿನ ಶ್ರೇಯಸ್ ಹೇಳಿದರು.

*
ಪಿಚ್‌ನಿಂದ ಬೌಲರ್‌ಗಳಿಗೆ ಹೆಚ್ಚು ನೆರವು ಸಿಗಲಿಲ್ಲ. ಬ್ಯಾಟ್ಸ್‌ಮ್‌ನಗಳಿಗೆ ಹೆಚ್ಚು ಅನುಕೂಲವಿತ್ತು. ಆದ್ದರಿಂದಲೇ ರನ್‌ಗಳ ಹೊಳೆ ಹರಿಯಿತು.
–ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.