ADVERTISEMENT

ರಾಜ್ಯಮಟ್ಟದ ಕಬಡ್ಡಿ: ಪ್ರಮುಖ ತಂಡಗಳಿಂದ ಪೈಪೋಟಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ದಾವಣಗೆರೆ: `ಹುಲಿಕೋಟೆ ಹುಲಿ~, `ಹುಲಿಕೋಟೆ ಚಾಣಕ್ಯ~, `ಕಬಡ್ಡಿ ಮಾಂತ್ರಿಕ~, `ಕಬಡ್ಡಿ ಸಾಮ್ರಾಟ್~ ಬಿರುದಾಂಕಿತರಾದ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ದಿ.ಆರ್. ವಸಂತಕುಮಾರ್ ಸ್ಮರಣಾರ್ಥ ನಗರದಲ್ಲಿ ದ್ರೋಣ ಕ್ರೀಡಾ ಸಮಿತಿ ವತಿಯಿಂದ ಆಯೋಜಿಸಿರುವ, ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿಗೆ ಅಕ್ಟೋಬರ್ 21ರಂದು ಚಾಲನೆ ದೊರೆಯಲಿದ್ದು, ಭಾರೀ ಸೆಣಸಾಟಕ್ಕೆ ಲೇಬರ್ ಕಾಲೊನಿಯ ನಾಟ್ಯಾಚಾರ್ಯ ಕುಲಕರ್ಣಿ ರಂಗಮಂದಿರ ಕಬಡ್ಡಿ ಅಂಕಣ ಸಿದ್ಧಗೊಂಡಿದೆ.

ಟೂರ್ನಿಗಾಗಿ ಕಬಡ್ಡಿ ಅಂಕಣ ನವವಧುವಿನಂತೆ ಸಿಂಗಾರಗೊಂಡಿದೆ. ಈ ಬಾರಿಯ ವಿಶೇಷ ಎಂದರೆ ಅಂಕಣದ ಸುತ್ತಲೂ ಸುಮಾರು ಎರಡು ಸಾವಿರ ಜನರು ಕುಳಿತು ವೀಕ್ಷಿಸುವಂತೆ ಕ್ರೀಡಾ ಗ್ಯಾಲರಿಯನ್ನು ನಿರ್ಮಾಣಗೊಳಿಸಲಾಗಿದೆ.

`ಟೂರ್ನಿಯಲ್ಲಿ ಬೆಂಗಳೂರಿನಿಂದ ವಿಜಯಾ, ಕೆಎಸ್‌ಪಿಸಿ, ಎಚ್‌ಎಎಲ್, ಬೆಲ್, ವಿಜಯನಗರ, ಬಿವೈಕೆ, ಶಕ್ತಿ, ಹೂಡಿ ಸ್ಪೋರ್ಟ್ಸ್ ಕ್ಲಬ್ ತಂಡಗಳು ಭಾಗವಹಿಸಲಿದ್ದು, ಅರ್ಜುನ ಪ್ರಶಸ್ತಿ ವಿಜೇತ ಹೊನ್ನಪ್ಪ ಕೇಂದ್ರ ಬಿಂದುವಾಗಲಿದ್ದಾರೆ~ ಎನ್ನುತ್ತಾರೆ ದ್ರೋಣ ಕ್ರೀಡಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್.

ಮೂರು ದಿನಗಳವರೆಗೆ ನಡೆಯುವ ಟೂರ್ನಿಯಲ್ಲಿ ಬಾಗಲಕೋಟೆ, ಚಿಂಚೋಳಿ, ಅಥಣಿ, ಧಾರವಾಡದ `ಸಾಯಿ~ ಹಾಗೂ ಬಳ್ಳಾರಿ ಜಿಲ್ಲೆಯ ಕುಡುತಿನಿ, ಕಂಪ್ಲಿ, ಚಿತ್ರದುರ್ಗ, ಹಿರಿಯೂರಿನ ತಂಡಗಳು ಸೆಣಸಲಿವೆ. ಶುಕ್ರವಾರ ಸಂಜೆ 6ಕ್ಕೆ ಟೂರ್ನಿಗೆ ಚಾಲನೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.