ಸೇಂಟ್ ಜಾನ್ಸ್, ಆ್ಯಂಟಿಗ (ಪಿಟಿಐ): ಮೂರು ರಾಷ್ಟ್ರಗಳ ನಡುವೆ ಜೂನ್ 28ರಿಂದ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯ ಮೊದಲ ಮೂರು ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಬ್ಯಾಟ್ಸ್ಮನ್ ರಾಮನರೇಶ್ ಸರವಣ ಅವರನ್ನು ತಂಡದಿಂದ ಕೈಬಿಡಲಾಗಿದೆ.
`ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬಹುತೇಕ ಆಟಗಾರರನ್ನೇ ಈ ಸರಣಿಗೂ ಮುಂದುವರಿಸಲಾಗಿದೆ. ಆದರೆ, ಸರವಣ ಮತ್ತು ವೇಗಿ ಜಾಸನ್ ಹೋಲ್ಡರ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ' ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
18 ತಿಂಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದಿದ್ದ ಸರವಣ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣಕ್ಕಾಗಿ ತಂಡದಿಂದ ಕೈ ಬಿಡಲಾಗಿದೆ. ಅವರು ದಕ್ಷಿಣ ಆಫ್ರಿಕಾ ಮತ್ತು ಭಾರತ ಎದುರಿನ ಪಂದ್ಯದಲ್ಲಿ ಒಟ್ಟು ಎರಡು ರನ್ ಮಾತ್ರ ಗಳಿಸಿದ್ದರು. ಮೂರು ರಾಷ್ಟ್ರಗಳ ನಡುವಿನ ಸರಣಿಯಲ್ಲಿ ಭಾರತ, ಶ್ರೀಲಂಕಾ ಮತ್ತು ವಿಂಡೀಸ್ ತಂಡಗಳು ಪಾಲ್ಗೊಳ್ಳಲಿವೆ.
ತಂಡ ಇಂತಿದೆ: ಡ್ವೇನ್ ಬ್ರಾವೊ (ನಾಯಕ), ಕ್ರಿಸ್ ಗೇಲ್, ಜಾನ್ಸನ್ ಚಾರ್ಲೆಸ್, ಡರೆನ್ ಬ್ರಾವೊ, ಮಾರ್ಲೊನ್ ಸ್ಯಾಮುಯೆಲ್ಸ್, ಕೀರನ್ ಪೊಲಾರ್ಡ್, ಡೇವೊನ್ ಸ್ಮಿತ್, ಡರೆನ್ ಸಮಿ, ದಿನೇಶ್ ರಾಮ್ದಿನ್, ಸುನಿಲ್ ನಾರಾಯಣ್, ಟಿನೊ ಬಿಸ್ಟ್, ರವಿ ರಾಂಪಾಲ್ ಮತ್ತು ಕೆಮೊರ್ ರೋಚ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.