ಸೇಂಟ್ ಲೂಸಿಯ (ಪಿಟಿಐ): ಪಾಕಿಸ್ತಾನ ವಿರುದ್ಧ ತವರು ನೆಲದಲ್ಲಿ ನಡೆಯುವ ಕ್ರಿಕೆಟ್ ಸರಣಿಗೆ ತಂಡದಲ್ಲಿ ಸ್ಥಾನ ಲಭಿಸದ ಕಾರಣ ಐಪಿಎಲ್ನಲ್ಲಿ ಆಡಲು ಮುಂದಾಗಿದ್ದೇನೆ ಎಂದು ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೇಳಿದ್ದಾರೆ.
ಅದೇ ರೀತಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯುಐಸಿಬಿ) ತೋರುತ್ತಿರುವ ಮಲತಾಯಿ ಧೋರಣೆಯಿಂದ ನನಗೆ ಈ ನಿರ್ಧಾರ ಕೈಗೊಳ್ಳದೆ ಬೇರೆ ಮಾರ್ಗವಿರಲಿಲ್ಲ ಎಂದಿದ್ದಾರೆ. ಈ ಮೂಲಕ ಅವರು ಡಬ್ಲ್ಯುಐಸಿಬಿಗೆ ತಿರುಗೇಟು ನೀಡಿದ್ದಾರೆ.
ಗೇಲ್ ಅವರು ಪಾಕ್ ವಿರುದ್ಧದ ಸರಣಿಯಿಂದ ಹಿಂದೆ ಸರಿದು ಐಪಿಎಲ್ ಸೇರಿದ್ದಕ್ಕೆ ವಿಂಡೀಸ್ ಮಂಡಳಿ ಅತೃಪ್ತಿ ವ್ಯಕ್ತಪಡಿಸಿತ್ತು. ಈ ಆಕ್ರಮಣಕಾರಿ ಬ್ಯಾಟ್ಸ್ಮನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲಿದ್ದಾರೆ.
‘ಅನಿವಾರ್ಯವಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಡಬ್ಲ್ಯುಐಸಿಬಿ ನನ್ನನ್ನು ಒಳಗೊಂಡಂತೆ ಕೆಲವು ಆಟಗಾರರನ್ನು ಕಡೆಗಣಿಸುತ್ತಿದೆ’ ಎಂದು ಗೇಲ್ ಮಂಡಳಿ ವಿರುದ್ಧ ತಮ್ಮ ಅತೃಪ್ತಿ ತೋಡಿಕೊಂಡರು.
‘ವಿಶ್ವಕಪ್ ಟೂರ್ನಿಯ ವೇಳೆ ಗಾಯಗೊಂಡಿದ್ದ ನಾನು ಚಿಕಿತ್ಸೆಗಾಗಿ ಇಂಗ್ಲೆಂಡ್ಗೆ ತೆರಳಿದ್ದೆ. ಆದರೆ ಆ ವೆಚ್ಚವನ್ನು ನಾನೇ ಭರಿಸಿದ್ದೆ. ಮಂಡಳಿ ಯಾವುದೆ ನೆರವು ನೀಡಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.