ADVERTISEMENT

ಸತತ ಜಯ; ಕರ್ನಾಟಕ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಪವನ್ ದೇಶಪಾಂಡೆ
ಪವನ್ ದೇಶಪಾಂಡೆ   

ಧರ್ಮಶಾಲ(ಬಿಸಿಸಿಐ ವೆಬ್‌ಸೈಟ್‌): ಆರ್‌.ಸಮರ್ಥ್ ಮತ್ತು ಪವನ್ ದೇಶಪಾಂಡೆ ಮತ್ತೊಮ್ಮೆ ಮಿಂಚಿದರು. ಮಧ್ಯಮ ವೇಗಿ ರೋನಿತ್ ಮೋರೆ ಹಾಗೂ ಆಫ್‌ ಸ್ಪಿನ್ನರ್‌ ಕೆ.ಗೌತಮ್‌ ಅತ್ಯುತ್ತಮ ದಾಳಿ ನಡೆಸಿದರು. ಇದರ ಪರಿಣಾಮ ಭಾರತ ‘ಎ’ ತಂಡವನ್ನು 65 ರನ್‌ಗಳಿಂದ ಮಣಿಸಿದ ಕರ್ನಾಟಕ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿತು.

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ 340 ರನ್‌ಗಳ ಗುರಿ ಬೆನ್ನತ್ತಿದ ಭಾರತ ‘ಎ’ ತಂಡದ ಆರಂಭಿಕ ಜೋಡಿ ವೇಗದಲ್ಲಿ ರನ್ ಸೇರಿಸಿದರು. ಪೃಥ್ವಿ ಶಾ (40; 34 ಎ, 8 ಬೌಂ) ಮತ್ತು ಉನ್ಮುಕ್ತ್‌ ಚಾಂದ್‌ (81; 70 ಎ, 14 ಬೌಂ) 61 ಎಸೆತಗಳಲ್ಲಿ 73 ರನ್ ಗಳಿಸಿದರು.

ಶುಭ್‌ಮನ್ ಗಿಲ್‌ ಮತ್ತು ಈಶಾನ್ ಕಿಶನ್ ಕೂಡ ಜಯದ ಗುರಿಯೊಂದಿಗೆ ಸ್ಫೋಟಿಸಿದರು. ಆದರೆ ಕರ್ನಾಟಕದ ವೇಗಿಗಳು ಮತ್ತು ಸ್ಪಿನ್ನರ್‌ ಗಳನ್ನು ಎದುರಿಸಿ ತಂಡಕ್ಕೆ ಗೆಲುವು ತಂದುಕೊಡಲು ಇವರಿಗೆ ಸಾಧ್ಯವಾಗಲಿಲ್ಲ. ತಂಡದ ಕೊನೆಯ ಆರು ವಿಕೆಟ್‌ಗಳು 37 ರನ್‌ಗಳಿಗೆ ಉರುಳಿದವು.

ADVERTISEMENT

ಸಮರ್ಥ, ಪವನ್‌ ಮಿಂಚಿನ ಆಟ: ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಭರ್ಜರಿ ಆಟದ ನೆರವಿನಿಂದ ಭಾರಿ ಮೊತ್ತ ಕಲೆ ಹಾಕಿತು.

ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಆರಂಭಿಕ ಬ್ಯಾಟ್ಸ್‌ ಮನ್ ಮಯಂಕ್‌ ಅಗರವಾಲ್‌ ವಿಫಲ ರಾದರು.

22 ರನ್‌ ಗಳಿಸಿದ ಅವರು ಮಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ನಾಯಕ ಕರುಣ್ ನಾಯರ್‌ ಕೂಡ ಹೆಚ್ಚು ಮೊತ್ತ ಗಳಿಸದೆ ಮರಳಿದರು. 35 ರನ್‌ ಗಳಿಸಿ ಸೂರ್ಯಕುಮಾರ್ ಯಾದವ್‌ ಎಸೆತದಲ್ಲಿ ಔಟ್‌ ಆದರು.

ಸೋಮವಾರ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದ ಸಮರ್ಥ್ ಮತ್ತೊಮ್ಮೆ ಮಿಂಚಿನ ಬ್ಯಾಟಿಂಗ್ ಮಾಡಿದರು. ನಾಯಕನ ಜೊತೆಗೂಡಿ ಎರಡನೇ ವಿಕೆಟ್‌ಗೆ 76 ರನ್ ಸೇರಿಸಿದ ಅವರು ತಂಡದ ಮೊತ್ತವನ್ನು ಮೂರಂಕಿ ಗಡಿ ದಾಟಿಸಿದರು.

ಕರುಣ್‌ ನಾಯರ್‌ ವಿಕೆಟ್ ಉರುಳಿದ ನಂತರ ಒಂದಾದ ಸಮರ್ಥ್ ಮತ್ತು ಪವನ್ ದೇಶಪಾಂಡೆ ಗುಡುಗಿದರು.

ಎಂಟು ಬೌಂಡರಿ ಗಳಿಸಿದ ಸಮರ್ಥ್‌ 87 ಎಸೆತಗಳಲ್ಲಿ 85 ರನ್ ಗಳಿಸಿದರೆ ಪವನ್ ದೇಶಪಾಂಡೆ ಮೂರು ಸಿಕ್ಸರ್ ಮತ್ತು 10 ಬೌಂಡರಿ ಸಿಡಿಸಿ 87 ಎಸೆತಗಳಲ್ಲಿ 95 ರನ್‌ ಸೇರಿಸಿದರು.

ಮೂರನೇ ವಿಕೆಟ್‌ಗೆ ಇವರಿಬ್ಬರು ಸೇರಿಸಿದ 131 ರನ್‌ ತಂಡ ಬೃಹತ್‌ ಮೊತ್ತ ಗಳಿಸಲು ನೆರವಾಯಿತು. 40ನೇ ಓವರ್‌ನಲ್ಲಿ ಸಮರ್ಥ್ ಮರಳಿದ ನಂತರ ಸ್ಟುವರ್ಟ್ ಬಿನ್ನಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳೊಂದಿಗೆ ಅವರು ಕೇವಲ 27 ಎಸೆತಗಳಲ್ಲಿ 48 ರನ್ ಗಳಿಸಿದರು. 23 ಎಸೆತಗಳಲ್ಲಿ 38 ರನ್‌ (3 ಸಿ, 1 ಬೌಂ) ಸಿಡಿಸಿದ ಸಿ.ಎಂ.ಗೌತಮ್‌ ತಂಡದ ಮೊತ್ತ 300ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ:
50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 339 (ಮಯಂಕ್‌ ಅಗರವಾಲ್‌ 22, ಕರುಣ್‌ ನಾಯರ್‌ 35, ಆರ್‌.ಸಮರ್ಥ್‌ 85, ಪವನ್‌ ದೇಶಪಾಂಡೆ 95, ಸ್ಟುವರ್ಟ್ ಬಿನ್ನಿ ಅಜೇಯ 48, ಸಿ.ಎಂ.ಗೌತಮ್‌ ಅಜೇಯ 38; ಮಹಮ್ಮದ್ ಶಮಿ 96ಕ್ಕೆ2, ಕುಲ್ವಂತ್‌ ಖೇಜ್ರೋಲಿಯಾ 63ಕ್ಕೆ1, ಸೂರ್ಯಕುಮಾರ್ ಯಾದವ್ 64ಕ್ಕೆ1); ಭಾರತ ‘ಎ’: 39.5 ಓವರ್‌ಗಳಲ್ಲಿ 274 (ಪೃಥ್ವಿ ಶಾ 40, ಉನ್ಮುಕ್ತ್‌ ಚಾಂದ್‌ 81, ಶುಭ್‌ಮನ್ ಗಿಲ್‌ 25, ಈಶಾನ್ ಕಿಶನ್‌ 73, ಅಂಕಿತ್‌ ಭಾವ್ನೆ 22; ರೋನಿತ್ ಮೋರೆ 64ಕ್ಕೆ3, ಶ್ರೇಯಸ್ ಗೋಪಾಲ್‌ 22ಕ್ಕೆ2, ಕೆ.ಗೌತಮ್ 52ಕ್ಕೆ4). ಫಲಿತಾಂಶ: ಕರ್ನಾಟಕಕ್ಕೆ 65 ರನ್‌ಗಳ ಜಯ. ಫೈನಲ್‌: ಕರ್ನಾಟಕ ಮತ್ತು ಭಾರತ ‘ಬಿ’, ಗುರುವಾರ. ಸಮಯ: ಮಧ್ಯಾಹ್ನ 1.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.