ADVERTISEMENT

ಹಳಿಯಾಳ: 2 ರಿಂದ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಹಳಿಯಾಳ (ಉತ್ತರಕನ್ನಡ ಜಿಲ್ಲೆ): ವಿ.ಆರ್.ದೇಶಪಾಂಡೆ ಮೆಮೋರಿಯಲ್  ಟ್ರಸ್ಟ್ ವತಿಯಿಂದ ಮಾರ್ಚ್ 2 ರಿಂದ 5ರವರೆಗೆ ಪಟ್ಟಣದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿ ಟೂರ್ನಿ ಆಯೋಜಿಸಲಾಗಿದೆ.

ಇಲ್ಲಿನ ಮೋತಿಕೆರೆ ಹತ್ತಿರದ ಜಿಲ್ಲಾ ಕುಸ್ತಿ ಅಖಾಡದಲ್ಲಿ ಪಂದ್ಯಗಳು ನಡೆಯಲಿವೆ. ಮೂರು ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 10 ಲಕ್ಷ ರೂಪಾಯಿಯ ಬಹುಮಾನವನ್ನು ಪಣಕ್ಕೆ ಇಡಲಾಗಿದೆ. 

ವಿ.ಆರ್.ದೇಶಪಾಂಡೆ ಸ್ಮರಣಾರ್ಥ 84 ಕೆ.ಜಿ ಮೇಲ್ಪಟ್ಟ ಕುಸ್ತಿಪಟುಗಳಿಗಾಗಿ ಆಯೋಜಿಸಿರುವ `ಮಹಾನ್ ಭಾರತ  ಕೇಸರಿ~ ರಾಷ್ಟ್ರಮಟ್ಟದ ಟೂರ್ನಿಯು ಪ್ರಥಮ ಬಹುಮಾನವಾಗಿ 1.5 ಲಕ್ಷ ರೂಪಾಯಿ, ಹಾಗೂ ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಕ್ರಮವಾಗಿ  75 ಸಾವಿರ ಹಾಗೂ 35 ಸಾವಿರ ರೂಪಾಯಿ ನಗದು ಪುರಸ್ಕಾರ ಒಳಗೊಂಡಿದೆ.

80 ಕೆ.ಜಿ. ಮೇಲ್ಪಟ್ಟ ಕುಸ್ತಿಪಟುಗಳಿಗಾಗಿ ರಾಜ್ಯ ಮಟ್ಟದ `ಕರ್ನಾಟಕ ಕೇಸರಿ~ ಟೂರ್ನಿ ನಡೆಯಲಿದ್ದು, ಮೊದಲ ಮೂರು ಸ್ಥಾನಗಳ ವಿಜೇತರು ಕ್ರಮವಾಗಿ 30 ಸಾವಿರ, 20 ಸಾವಿರ ಹಾಗೂ 10 ಸಾವಿರ ರೂಪಾಯಿ ಪಡೆಯಲಿದ್ದಾರೆ. ಇದಲ್ಲದೆ 74 ಕೆ.ಜಿ. 66 ಕೆ.ಜಿ, 60ಕೆ.ಜಿ. ಹಾಗೂ 55 ಕೆ.ಜಿ. ವಿಭಾಗದಲ್ಲಿ ಸಹ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗಾಗಿ ರಾಷ್ಟ್ರಮಟ್ಟದ `ವೀರ ರಾಣಿ ಕಿತ್ತೂರ ಚೆನ್ನಮ್ಮಾ ಭಾರತ ಕೇಸರಿ~ ಟೂರ್ನಿ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಟ್ರಸ್ಟ್‌ನ ಗೌರವ ಅಧ್ಯಕ್ಷ ಯಶವಂತ ಸ್ವಾಮೀಜಿ (9980685714) ನಾರಾಯಣ ಬೆಳಗಾಂವಕರ (9901254145) ಹಾಗೂ ನಾರಾಯಣ ದಡ್ಡಿ (9902728607) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.