ಭೋಪಾಲ (ಪಿಟಿಐ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ ಹಾಕಿ ಇಂಡಿಯಾ ಕೇವಲ 25 ಸಾವಿರ ರೂ. ಬಹುಮಾನ ನೀಡಿ ಅವಮಾನ ಮಾಡಿದ ಬೆನ್ನಲ್ಲೆ ಇತರೆ ರಾಜ್ಯ ಸರ್ಕಾರಗಳು ಆಟಗಾರರಿಗೆ ನೆರವಿಗೆ ನಿಂತಿವೆ.
ಬುಧವಾರವಷ್ಟೇ ಕೇಂದ್ರ ಹಾಗೂ ಪಂಜಾಬ್ ಸರ್ಕಾರ ಭಾರತ ತಂಡಕ್ಕೆ ಬಹುಮಾನ ನೀಡಿದ್ದವು. ಈಗ ಭಾರತ ತಂಡದ ಆಟಗಾರರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಪ್ರಕಟಿಸಿದ್ದಾರೆ.
ಮಹಾರಾಷ್ಟ್ರ ವರದಿ: ಬಡತನದ ನಡುವೆಯೂ ಅತ್ಯುತ್ತಮ ಸಾಧನೆ ಮಾಡಿರುವ ಮಹಾರಾಷ್ಟ್ರದ ವಾಲ್ಮೀಕಿ ಯುವರಾಜ್ಗೂ ಸಹ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಗುರುವಾರ ವಿತರಿಸಿದರು.
ಮನೆಯಲ್ಲಿ ವಿದ್ಯುತ್ ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದ ವಾಲ್ಮೀಕಿ ಅವರ ಮನೆಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ಎಲ್ಲಿನ ಸರ್ಕಾರ ತಿಳಿಸಿದೆ. ಈಗಾಗಲೇ ಅಲ್ಲಿನ ಸರ್ಕಾರ ಆಟಗಾರನಿಗೆ 10 ಲಕ್ಷ ರೂ.ನೌಕರಿ ಹಾಗೂ ಮನೆ ನೀಡುವುದಾಗಿಯೂ ಹೇಳಿದೆ.
ತಿರುವನಂತಪುರ ವರದಿ: ಭಾರತ ತಂಡದಲ್ಲಿದ್ದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಕೇರಳ ಸರ್ಕಾರ ಐದು ಲಕ್ಷ ರೂ. ಹಾಗೂ ತಂಡದ ಮ್ಯಾನೇಜರ್ ರಮೇಶ್ ಕೊಲಪ್ಪ ಅವರಿಗೂ 50,000ರೂ. ಬಹುಮಾನ ಪ್ರಕಟಿಸಿದೆ.
ನಮ್ಮ ರಾಜ್ಯದಲ್ಲಿ ಉತ್ತಮ ಸೌಲಭ್ಯಗಳು ಇಲ್ಲ. ಆದರೂ ಶ್ರೀಜೇಶ್ ಉತ್ತಮ ಸಾಧನೆ ಮಾಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಗುಣಮಟ್ಟದ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.