ADVERTISEMENT

ಹೆಚ್ಚಿದ ಹುಮ್ಮಸ್ಸು: ಮಿಸ್ಬಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 19:30 IST
Last Updated 27 ಮಾರ್ಚ್ 2011, 19:30 IST
ಹೆಚ್ಚಿದ ಹುಮ್ಮಸ್ಸು: ಮಿಸ್ಬಾ
ಹೆಚ್ಚಿದ ಹುಮ್ಮಸ್ಸು: ಮಿಸ್ಬಾ   

ಮೊಹಾಲಿ: ಭಾರತ ತಂಡದ ವಿರುದ್ಧ ಇಲ್ಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ತಂಡ ಅತ್ಯುತ್ತಮವಾದ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು ಆ ತಂಡದ ಉಪ ನಾಯಕ ಮಿಸ್ಬಾ ಉಲ್ ಹಕ್ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ತಂಡ ಒಂದಾಗಿ ಆಡುತ್ತಿದ್ದು, ಅದ್ಭುತವಾದುದನ್ನು ಸಾಧಿಸುವ ಇರಾದೆ ಹೊಂದಿದೆ. ಭಾರತದ ಎದುರು ಜಯ ಸಾಧಿಸಿ, ಫೈನಲ್‌ಗೆ ಹೋಗುವ ಹುಮ್ಮಸ್ಸು ಪ್ರತಿ ಆಟಗಾರನಲ್ಲೂ ಇದೆ’ ಎಂದು ಹೇಳಿದರು.‘ನಿಸ್ಸಂಶಯವಾಗಿ ಇದೊಂದು ಮಹತ್ವದ ಪಂದ್ಯ. ನಮ್ಮ ಕನಸುಗಳು ಗರಿಗೆದರಲು ಪಂದ್ಯವನ್ನು ಜಯಿಸಲೇಬೇಕು. ಆದ್ದರಿಂದಲೇ ಆ ತುಡಿತ ಎಲ್ಲರಲ್ಲೂ ಎದ್ದು ಕಾಣುತ್ತಿದೆ’ ಎಂದು ತಿಳಿಸಿದರು.

‘ತಂಡಕ್ಕೆ ಅಪಾರ ಸಂಖ್ಯೆಯ ಬೆಂಬಲಿಗರಿದ್ದಾರೆ. ಇಡೀ ದೇಶ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ಕುತೂಹಲದಿಂದ ಗಮನಿಸಲಿದೆ. ಇದೇ ಕಾರಣದಿಂದ ನಮ್ಮ ಮೇಲಿನ ನಿರೀಕ್ಷೆಗಳು ಹೆಚ್ಚಿದ್ದು, ಪಂದ್ಯಕ್ಕೆ ಭಾರಿ ಮಹತ್ವ ಬಂದಿದೆ’ ಎಂದರು.2007ರ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಔಟಾದ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ‘ಯಾವಾಗಲೂ ಹಳೆಯದನ್ನೇ ಧ್ಯಾನಿಸುತ್ತಾ ಕುಳಿತರೆ ಏನೂ ಪ್ರಯೋಜನವಿಲ್ಲ. ನಮ್ಮ ದೃಷ್ಟಿ ಭವಿಷ್ಯದ ಮೇಲೆ ನೆಟ್ಟಿದೆ’ ಎಂದು ಹೇಳಿದರು.
ಈ ಮಧ್ಯೆ ‘ಭಾರತದ ವಿರುದ್ಧದ ಪಂದ್ಯದಲ್ಲಿ ಮಿಸ್ಬಾ ಮತ್ತು ಯೂನಿಸ್ ಖಾನ್ ಬ್ಯಾಟಿಂಗ್‌ನಲ್ಲಿ ನಮ್ಮ ಪ್ರಮುಖ ಅಸ್ತ್ರಗಳು’ ಎಂದು ಆ ತಂಡದ ವ್ಯವಸ್ಥಾಪಕ ಇಂತಿಖಾಬ್ ಅಲಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.