ಅರೆಕ್ವಿಪಾ, ಪೆರು : ಶರವೇಗದ ಚಾಲನೆ ಮುಂದುವರಿಸಿರುವ ಕರ್ನಾಟಕದ ಸಿ.ಎಸ್.ಸಂತೋಷ್, ಡಕಾರ್ ರ್ಯಾಲಿಯ ಐದನೇ ಹಂತದ ಸ್ಪರ್ಧೆಯ ಅಂತ್ಯಕ್ಕೆ ಒಟ್ಟಾರೆ 51ನೇ ಸ್ಥಾನ ಗಳಿಸಿದ್ದಾರೆ.
ಹೀರೊ ಮೋಟರ್ ಸ್ಪೋರ್ಟ್ಸ್ ರ್ಯಾಲಿ ತಂಡವನ್ನು ಪ್ರತಿನಿಧಿಸಿರುವ ಸಂತೋಷ್ ಬುಧವಾರ ನಡೆದ ಐದನೇ ಹಂತದ ಸ್ಪರ್ಧೆಯನ್ನು 52ನೇಯವರಾಗಿ ಮುಗಿಸಿದರು.
‘ಐದನೇ ಹಂತದ ಸ್ಪರ್ಧೆ ತುಂಬಾ ಕಠಿಣವಾಗಿತ್ತು. ಮಂಗಳವಾರ ರಾತ್ರಿ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಹೀಗಾಗಿ ತುಂಬಾ ಆಯಾಸಗೊಂಡಿದ್ದೆ. ಆದ್ದರಿಂದ ನಿರೀಕ್ಷಿಸಿದಷ್ಟು ವೇಗವಾಗಿ ಬೈಕ್ ಓಡಿಸಲು ಆಗಲಿಲ್ಲ’ ಎಂದು ಸಂತೋಷ್ ತಿಳಿಸಿದ್ದಾರೆ.
ಹೀರೊ ತಂಡದ ಮತ್ತೊಬ್ಬ ಸ್ಪರ್ಧಿ ಒರಿಯಲ್ ಮೆನಾ ಒಟ್ಟಾರೆ 21ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಅವರು ಐದನೇ ಹಂತದ ರೇಸ್ ಅನ್ನು 11ನೇಯವರಾಗಿ ಪೂರ್ಣಗೊಳಿಸಿದರು.
ಅರವಿಂದ್ಗೆ ಗಾಯ: ಟಿವಿಎಸ್ ರೇಸಿಂಗ್ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಕೆ.ಪಿ.ಅರವಿಂದ್ ಐದನೇ ಹಂತದ ವೇಳೆ ಗಾಯಗೊಂಡರು.
ರ್ಯಾಲಿಯ ವೇಳೆ ನಡೆದ ಅಪಘಾತದಲ್ಲಿ ಅರವಿಂದ್ ಅವರ ಪಾದಕ್ಕೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಟಿವಿಎಸ್ ತಂಡದ ಮತ್ತೊಬ್ಬ ಸ್ಪರ್ಧಿ ವುವಾನ್ ಪೆಡೆರೆರೊ ಗಾರ್ಸಿಯಾ ಒಟ್ಟಾರೆ 15ನೇ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.