ಮುಂಬೈ: ವಿದ್ಯಾರ್ಥಿಗಳ ಗುಂಪೊಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ಭಾರತ– ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯದ ಸಂದರ್ಭದಲ್ಲಿ ಸಿಎಎ ವಿರುದ್ಧ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸಿದೆ.
ಬಿಳಿ ಟಿ–ಶರ್ಟ್ಗಳನ್ನು ಧರಿಸಿದ ವಿದ್ಯಾರ್ಥಿಗಳ ಗುಂಪು ‘ನೋ ಸಿಎಎ’, ‘ನೋ ಎನ್ಪಿಆರ್’ ಎಂಬ ಬ್ಯಾನರ್ಗಳನ್ನು ಪ್ರದರ್ಶಿಸಿತು. ಆದರೆ ಭಾರತದ ಇನಿಂಗ್ಸ್ ಮುಗಿಯುವ ಮೊದಲೇ ಈ ಗುಂಪು ಕ್ರೀಡಾಂಗಣದಿಂದ ನಿರ್ಗಮಿಸಿತು. ಈ ಗುಂಪಿನಲ್ಲಿ 26 ವಿದ್ಯಾರ್ಥಿಗಳಿದ್ದು, ‘ಮುಂಬೈ ಅಗೇಂಸ್ಟ್ ಸಿಎಎ’ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಈ ಪಂದ್ಯದಲ್ಲಿ ಭಾರತ ಎದುರುಆಸ್ಟ್ರೇಲಿಯಾ ಹತ್ತು ವಿಕೆಟ್ಗಳ ಸುಲಭ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಬಳಗ 255 ರನ್ ಗಳಿಗೆ ಆಲೌಟ್ ಆಗಿತ್ತು. ಮೊತ್ತ ಬೆನ್ನಟ್ಟಿದ ಪ್ರವಾಸಿ ಪಡೆಯ ಆರಂಭಿಕ ಆ್ಯರನ್ ಫಿಂಚ್ (110) ಹಾಗೂ ಡೇವಿಡ್ ವಾರ್ನರ್ (128) ಭರ್ಜರಿ ಶತಕಗಳನ್ನು ಸಿಡಿಸಿ ತಮ್ಮ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ರಿಷಭ್ ಪಂತ್ ತಲೆಗೆ ಪೆಟ್ಟು
ಬ್ಯಾಟಿಂಗ್ ವೇಳೆ ರಿಷಭ್ ಪಂತ್ ಅವರ ಹೆಲ್ಮೆಟ್ಗೆ ಚೆಂಡು ಅಪ್ಪಳಿಸಿತು. ಇದರಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಯಿತು.
ಅವರ ಬದಲಿಗೆ ಕೆ.ಎಲ್. ರಾಹುಲ್ ವಿಕೆಟ್ಕೀಪಿಂಗ್ ನಿರ್ವಹಿಸಿದರು. ಮನೀಷ್ ಪಾಂಡೆ ಬದಲೀ ಫೀಲ್ಡರ್ ಆಗಿ ಆಡಿದರು. ಪ್ಯಾಟ್ ಕಮಿನ್ಸ್ ಅವರ ಎಸೆತವೊಂದು ನಿರೀಕ್ಷೆಗಿಂತ ಹೆಚ್ಚು ಎತ್ತರ ಪುಟಿದು ರಿಷಭ್ ಹೆಲ್ಮೆಟ್ಗೆ ಬಡಿಯಿತು. ಅವರು ಈ ಪಂದ್ಯದಲ್ಲಿ 33 ಎಸೆತಗಳಲ್ಲಿ 28 ರನ್ ಗಳಿಸಿದರು.
‘ತಜ್ಞ ವೈದ್ಯರು ರಿಷಭ್ ಅವರ ತಪಾಸಣೆ ಮಾಡಿದ್ದಾರೆ. ಬುಧವಾರ ಬೆಳಿಗ್ಗೆಯವರೆಗೂ ಅವರ ಮೇಲೆ ವೈದ್ಯರು ವಿಶೇಷ ನಿಗಾ ಇಟ್ಟಿದ್ದು, ಆರೈಕೆ ಮಾಡುತ್ತಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.